ಪೇಜಾವರ ಶ್ರೀಗಳಿಗೇಕೆ ಡಾಕ್ಟರೇಟ್ ಗೌರವ: ದಲಿತರು
ಹಣಕ್ಕೆ ಡಾಕ್ಟರೇಟ್ ಮಾರಾಟ?: ಕಳೆದ ಸಾಲಿನಲ್ಲಿ ಕುಲಪತಿಗಳು ಗೌರವ ಡಾಕ್ಟರೇಟ್ ಪದವಿಗಳನ್ನು ಹಣಕ್ಕೆ ಮಾರಿಕೊಂಡ ಆರೋಪ ಎದುರಿಸುತ್ತಿದ್ದರೂ ಸಹ ಮತ್ತೊಮ್ಮೆ ಹಿಂದೂ ಧರ್ಮದ ಪ್ರತಿಪಾದಕ ಹಾಗೂ ಆರೆಸ್ಸೆಸ್ ವಕ್ತಾರರಂತೆ ಕೆಲಸ ಮಾಡುವ ವಿಶ್ವೇಶರ ತೀರ್ಥ ಸ್ವಾಮೀಜಿಗೆ ಡಾಕ್ಟರೇಟ್ ನೀಡುವ ಮೂಲಕ ವಿವಿಯನ್ನು ಆರೆಸ್ಸೆಸ್ ಗುಪ್ತ ಅಜೆಂಡಾವನ್ನು ಜಾರಿಗೆ ತರಲು ಹೋರಟಿದ್ದಾರೆ ಎಂದು ವೆಂಕಟೇಶ್ ಆಪಾದಿಸಿದರು.
ಪೇಜಾವರ ಶ್ರೀಗಳ ಸಾಧನೆಯಾದರೂ ಏನು?: ಗೌರವ ಡಾಕ್ಟರೇಟ್ ಪಡೆಯಲು ಶ್ರೀಗಳು ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದ ಅವರು, ಧರ್ಮ ಮತ್ತು ರಾಜಕಾರಣ ಎರಡನ್ನು ಅಪವಿತ್ರಗೊಳಿಸಿ, ದಲಿತರ ಮನೆಗೆ ಭೇಟಿ ನೀಡಿ ಸಮಾಜದಲ್ಲಿರುವ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬಹುದೆಂಬ ಭ್ರಮೆಯಲ್ಲಿರುವ ಪೇಜಾವರಶ್ರೀಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ಮೂಲಕ ತುಮಕೂರು ವಿವಿಯ ಕುಲಪತಿಗಳು ದಲಿತ ವಿರೋಧಿ ನೀತಿಯಿಂದ ಅಲುಗಾಡುತ್ತಿದ್ದ ತಮ್ಮ ಸ್ಥಾನವನು ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪೇಜಾವರ ಶ್ರೀಗಳು ಇದುವರೆಗೂ ಒಂದು ಶಾಲೆ, ಆಶ್ರಮ ನಡೆಸಿದ ಉದಾಹರಣೆ ಇಲ್ಲ. ಜೊತೆಗೆ ಯಾವುದೇ ಶ್ರಮವಿಲ್ಲದೆ ಭಕ್ತರಿಂದ ಬರುವ ಕಾಣಿಕೆಯನ್ನೇ ಬೇಕಾದಂತೆ ಖರ್ಚು ಮಾಡುವ ಇವರ ಯಾವ ಸಾಧನೆಯನ್ನು ಮುಂದಿಟ್ಟುಕೊಂಡು ಡಾಕ್ಟರೇಟ್ ನೀಡಲಾಗುತ್ತಿದೆ ಎಂಬುದನ್ನು ಕುಲಪತಿಗಳು ಬಹಿರಂಗ ಪಡಿಸಬೇಕು ಎಂದು ಚೇಳೂರು ವೆಂಕಟೇಶ್ ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಅನ್ಯಾಯ: ತುಮಕೂರು ವಿವಿಯ ಕುಲಪತಿ ಡಾ.ಎಸ್.ಸಿ. ಶರ್ಮರ ಇತ್ತೀಚಿನ ನಡವಳಿಕೆಗಳು ಅವರ ದಲಿತ ವಿರೋಧಿ ನೀತಿಯನ್ನು ಬಹಿರಂಗಗೊಳಿಸಿವೆ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ದಲಿತರು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ದೊರೆಯ ಬೇಕಾಗಿದ್ದ ಸೀಟುಗಳನ್ನು ಕಡಿತಗೊಳಿಸಿದರು. 22ದಿನ ದಲಿತರು, ಪ್ರಗತಿಪರ ಮುಖಂಡರು ವಿವಿಯ ಮುಂದೆ ಹೋರಾಟ ನಡೆಸಿದರೂ ಅವರ ಬೇಡಿಕೆಗಳ ಈಡೇರಿಸುವತ್ತ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ವಾರ್ಷಿಕ ಮೂರು ಕೋಟಿ ರೂ. ಆದಾಯ ತಂದುಕೊಡುವ ಶ್ರೀಕೃಷ್ಣಮಠವನ್ನು ಡಿನೋಟಿಫೈ ಮಾಡಿ ಅಷ್ಟಮಠಗಳ ಅಧೀನಕ್ಕೆ ತೆಗೆದುಕೊಳ್ಳುವ ಮೂಲಕ ಸರಕಾರಕ್ಕೆ ಮತ್ತು ಸಮಾಜಕ್ಕೆ ದ್ರೋಹ ಬಗೆದಿರುವ ಇಂತಹ ಸೋಗಲಾಡಿತನದ ಸ್ವಾಮೀಜಿ ಗಳಿಗೆ ಡಾಕ್ಟರೇಟ್ ನೀಡುವುದರಲ್ಲಿ ಅರ್ಥವಿದೆಯೇ ಎಂದು ವೆಂಕಟೇಶ್ ಪ್ರಶ್ನಿಸಿದರು.