ಕಡ್ಲೇಕಾಯಿ ಪರಿಷೆಗೆ ಬಸವನಗುಡಿ ಸಕಲ ಸಿದ್ಧತೆ
ಅಂದಾಜಿನ ಪ್ರಕಾರ ಪ್ರತಿ ವರ್ಷ ಎರಡು ಲಕ್ಷ ಜನ ಭಾಗವಹಿಸುವ ಈ ಐತಿಹಾಸಿಕ ಮತ್ತು ಸಾಂಸ್ಕೃತಿಕ ಜಾತ್ರೆ ವರ್ಷದ ಕಡೇ ಕಾರ್ತಿಕ ಸೋಮವಾರದಂದು ನಡೆಯುತ್ತದೆ. ಕಡಲೇಕಾಯಿ ಬೆಳೆದ ರೈತ ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಗ್ರಾಹಕರಿಗೆ ಈ ಜಾತ್ರೆಯಲ್ಲಿ ತಲುಪಿಸುತ್ತಾನೆ. ಈ ಪರಿಷೆಗೆ ರಾಮನಗರ, ಚನ್ನಪಟ್ಟಣ, ತುಮಕೂರು, ಕೋಲಾರ ಮುಂತಾದ ಕಡೆಯಿಂದ ಬರುವ ರೈತರು ತಾವು ಬೆಳೆದ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿ ನಂತರ ಮಾರಾಟ ಮಾಡುವ ಪದ್ದತಿಯಂತೆ ಪರಿಷೆ ನಡೆಯುತ್ತದೆ.
ಪ್ಲಾಸ್ಟಿಕ್ ಚೀಲಕ್ಕೆ ನಿಷೇಧಕ್ಕೆ ಮನವಿ : ಪರಿಷೆಯಲ್ಲಿ ಭಾಗವಹಿಸುವ ಮಾರಾಟಗಾರರು ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ಚೀಲ ಬಳಸುವ ಬದಲು ಬಟ್ಟೆ ಅಥವಾ ಕಾಗದ ಚೀಲ ಬಳಸುವಂತೆ ಸಮನ್ವಿತ ಸಂಸ್ಥೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದೆ. ಪರಿಸರದಲ್ಲಿ ಶುಚಿತ್ವ ಕಾಪಾಡಲು ಪ್ಲಾಸ್ಟಿಕ್ ಮುಕ್ತ ಕಡಲೇಕಾಯಿ ಪರಿಷೆಯಾಗಿ ಆಚರಿಸಲು ನಿರ್ಧರಿಸದೆ. ಬಸವನಗುಡಿ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿದ್ದು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಈ ಉತ್ಸವದಲ್ಲಿ ಎಲ್ಲರೂ ಪ್ಲಾಸ್ಟಿಕ್ ಕಡಿಮೆ ಬಳಕೆ ಮಾಡಿಯೆಂದು ಪಾಲಿಕೆ ಸದಸ್ಯ ಕೆ ಚಂದ್ರಶೇಖರ್ ಜನರಿಗೆ ಮನವಿ ಮಾಡಿದ್ದಾರೆ.
ಏನಿದು ಕಡಲೇಕಾಯಿ ಪರಿಷೆ?: ರೈತ ತಾನು ಬೆಳೆದ ಬೆಳೆಯನ್ನು ಬಸವ(ಎತ್ತು) ಹಾಳು ಮಾಡುತ್ತಿದ್ದ. ಒಂದು ದಿನ ಗ್ರಾಮಸ್ಥರೆಲ್ಲಾ ಸೇರಿ ಬಸವನನ್ನು ಹಿಡಿಯಲು ನಿರ್ಧರಿಸಿದರು. ಬಸವ ಎಂದಿನಂತೆ ಬೆಳೆ ತಿನ್ನಲು ಬಂದಾಗ ಗ್ರಾಮಸ್ಥರು ಬಸವನನ್ನು ಹಿಡಿಯಲು ಓಡುತ್ತಿದ್ದರು, ಅವರಿಂದ ತಪ್ಪಿಸಿಕೊಂಡು ಬಸವ ಈ ಕ್ಷೇತ್ರದಲ್ಲಿ ಕಲ್ಲಾದ. ಅಂದಿನಿಂದ ಪ್ರತಿವರ್ಷ ಕಡೇ ಕಾರ್ತಿಕ ಸೋಮವಾರದಲ್ಲಿ ಕಡಲೇಕಾಯಿ ಬೆಳೆಯನ್ನು ಮೊದಲು ಬಸವನಿಗೆ ಅರ್ಪಿಸಿ ನಂತರ ಮಾರಾಟ ರೈತರು ಮಾರಾಟ ಮಾಡುತ್ತಾರೆ.