ಯಡಿಯೂರಪ್ಪ ವಿರುದ್ಧದ ಶಿಕಾರಿಪುರ ಬಂದ್ ಯಶಸ್ವಿ
ಭ್ರಷ್ಟಾಚಾರ ತಾಂಡವವಾಡುತ್ತಿದೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಾಖಲೆಗಳ ಸಮೇತ ಸಿಕ್ಕಿಬಿದ್ದಿದ್ದಾರೆ. ಬಿಜೆಪಿಯ ವರಿಷ್ಠರು ಈ ಭ್ರಷ್ಟ ಮುಖ್ಯಮಂತ್ರಿಯ ವಿರುದ್ಧ ಕಟುವಾದ ಕ್ರಮ ಕೈಗೊಳ್ಳುತ್ತಾರೆಂಬ ನಿರೀಕ್ಷೆಯೂ ಸುಳ್ಳಾಗಿದೆ. ಇಡೀ ಬಿಜೆಪಿ ಪಕ್ಷ ಯಡಿಯೂರಪ್ಪರವರ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪ್ಪೆ ಸಾರುವುದರ ಮೂಲಕ ನೈತಿಕತೆಯನ್ನು ಕಳೆದು ಕೊಂಡಿದೆ. ಈ ಭ್ರಷ್ಟಾಚಾರದಿಂದ ಬಿಜೆಪಿಯ ಕೇಂದ್ರನಾಯಕರಿಗೂ ಪಾಲು ಸಿಕ್ಕಿರುವಂತೆ ಕಂಡುಬರುತ್ತಿದೆ ಎಂದು ಪ್ರತಿಭಟನಾನಿರತ ಕಾಂಗ್ರೆಸ್ಸಿಗರು ಆರೋಪಿಸಿದರು.
ಮುಖ್ಯಮಂತ್ರಿಗಳ ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಬಿಜೆಪಿ ಹೈಕಮಾಂಡ್ನ ತೆವಲು ನೀತಿಯನ್ನು ಖಂಡಿಸಿ ಕೆಪಿಸಿಸಿ ಸದಸ್ಯ ಶಾಂತವೀರಪ್ಪ ಗೌಡ ಶಿಕಾರಿಪುರ ತಾಲ್ಲೂಕು ಬಂದ್ಗೆ ಕರೆ ನೀಡಿದ್ದು, ಇಂದು ಸಂಪೂರ್ಣ ತಾಲ್ಲೂಕು ಅವರ ಬೆಂಬಲಕ್ಕೆ ನಿಂತಿದೆ. ಆದರೆ, ಶಾಂತವೀರಪ್ಪ ಗೌಡರನ್ನು ಏಕಾಏಕೀ ಮನೆಯಿಂದಲೇ ಬಂಧಿಸಿ ಕುಂಸಿ ಠಾಣೆಯಲ್ಲಿ ಇಟ್ಟಿರುವುದು ಸರಿಯಲ್ಲ. ಅಧಿಕಾರಿಗಳ ಕೈ ಕಡಿಯಿರಿ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ನಾಯಕರು ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡುವ ಹಕ್ಕು ಕಳೆದುಕೊಂಡಿದ್ದಾರೆ. ಆರೋಪ ಕೇಳಿಬಂದ ತಕ್ಷಣ ಶಶಿತರೂರ್ ಹಾಗೂ ಅಶೋಕ್ ಚವ್ಹಾಣ್ ವಿರುದ್ಧ ಕ್ರಮ ಕೈಗೊಂಡ ಕಾಂಗ್ರೆಸ್ನಂತೆ ಬಿಜೆಪಿಯೂ ಕ್ರಮಕೈಗೊಳ್ಳಬೇಕಿತ್ತು. ಆದರೆ, ಬಿಜೆಪಿ ಎಲ್ಲವನ್ನೂ ಬಿಟ್ಟಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಧರ್ಮ ರಕ್ಷಣೆಯ ಗುರಿಯಾಗಬೇಕಿದ್ದ ಮಠಾಧೀಶರು ಜಾತಿಯ ವ್ಯವಸ್ಥೆಗೆ ಚಾಲನೆ ನೀಡುವುದರ ಮೂಲಕ ಜಾತಿಸಂಘರ್ಷಕ್ಕೆ ಎಡೆಮಾಡಿರುವುದು ಖಂಡನೀಯ. ಕೆಲವು ಮಠಾಧೀಶರು ಭ್ರಷ್ಟ ಯಡಿಯೂರಪ್ಪ ಪರ ನಿಂತಿರುವುದು ದುರ್ದೈವ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ ಆಯೋಗವನ್ನು ರಕ್ಷಣೆ ಮಾಡಿರುವುದು ಖಂಡನೀಯ.
ಶಿಕಾರಿಪುರದಲ್ಲಿ ಈ ಭ್ರಷ್ಟ ಮುಖ್ಯಮಂತ್ರಿಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಹಾಗೂ ಪ್ರಗತಿಪರ ಸಂಘಟನೆಯ ನಾಯಕರುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಯಡಿಯೂರಪ್ಪ ಗೂಂಡಾ ಪ್ರವೃತ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರು ಯಡಿಯೂರಪ್ಪನ ಕೈಗೊಂಬೆಯಂತೆ ವರ್ತಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.