ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಲಿಷ್ಟ ಶಸ್ತ್ರಚಿಕಿತ್ಸೆ ಯಶಸ್ವಿ
ಈ ವಿಷಯ ಕುರಿತಾಗಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಆಸ್ಪತ್ರೆಯ ನಿರ್ದೇಶಕ ಡಾ.ಮಲ್ಲೇಶ್ ಹುಲ್ಲಮನಿ ಮಾತನಾಡಿ, ಮಲೆನಾಡು ಭಾಗದವರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಯಾವುದೇ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಬಡವರಿಗೆ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಚಿಕಿತ್ಸೆ ಒದಗಿಸಬೇಕು ಎಂದು 2003ರಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ 7,630 ರೋಗಿಗಳನ್ನು ಪರೀಕ್ಷಿಸಲಾಗಿದೆ. 2134 ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. 1895 ರೇಡಿಯೋಥೆರಪಿ, 1151 ಕಿಮೊಥೆರಪಿ ಮಾಡಲಾಗಿದೆ ಎಂದರು.
ಅಷ್ಟೇ ಅಲ್ಲದೇ, ಕಾರವಾರ, ಹಾವೇರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಅನೇಕ ಭಾಗಗಳಲ್ಲಿ 144 ಕ್ಯಾಂಪ್ಗಳನ್ನೂ ಸಹ ಏರ್ಪಡಿಸಲಾಗಿದ್ದು, ಇದರ ಮೂಲಕ ಜನರಿಗೆ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಹಾಗೆಯೇ, ಇತ್ತೀಚೆಗೆ ಮಹಿಳೆಯೊಬ್ಬರಿಗೆ ಪಿತ್ತಜನಕಾಂಗದಲ್ಲಿ ಕ್ಯಾನ್ಸರ್ ಇರಬಹುದೆಂದು ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಲ್ನಾಡ್ ಆಸ್ಪತ್ರೆಗೆ ಕಳಿಸಿದರು. ಆಸ್ಪತ್ರೆಯ ತಜ್ಞರಾದ ಡಾ|.ರಮೇಶ್ರವರು ಹಲವು ಪರೀಕ್ಷೆಗಳಿಂದ ಪಿತ್ತಜನಕಾಂಗದಲ್ಲಿ ಅಪಾಯಕರವಾದ ಬಹುದೊಡ್ಡ ಗೆಡ್ಡೆ ಬೆಳೆಯುತ್ತಿದೆ ಎಂದು ದೃಢಪಡಿಸಿದ್ದರು. ನಂತರ, ಸತತ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸಾ ತಜ್ಞರು ಕ್ಲಿಷ್ಟಕರವಾದ ಮತ್ತು ಅಪಾಯಕರವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ ಎಂದರು.
ಇಂತಹ ಶಸ್ತ್ರಚಿಕಿತ್ಸೆಯನ್ನು ಸುಸಜ್ಜಿತವಾದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಮಾಡುತ್ತಿದ್ದು, ಈಗ ಇಲ್ಲಿನ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದಾನಿಗಳು ಮುಂದೆ ಬರಲಿ: ದೊಡ್ಡ ದೊಡ್ಡ ನಗರಗಳಲ್ಲಿ ಬಹು ದುಬಾರಿಯ ಚಿಕಿತ್ಸೆಗಾಗಿ ಕೆಲವು ಕಾರ್ಪೋರೇಟ್ ಸಂಸ್ಥೆಗಳು ದೊಡ್ಡ ದೊಡ್ಡ ಇಂಡಸ್ಟ್ರಿಯವರು ಹಾಗೂ ಇನ್ನಿತರರು ಬಡವರ ಸಹಾಯಕ್ಕಾಗಿ ಧನಸಹಾಯ ಮಾಡುತ್ತಿದ್ದಾರೆ. ಅದರಂತೆ, ಶಿವಮೊಗ್ಗ ನಗರದಲ್ಲಿ ಸಾಕಷ್ಟು ಜನ ಶ್ರೀಮಂತರಿದ್ದು, ಅವರು ಕೂಡ ಬಡವರ ಚಿಕಿತ್ಸೆಗಾಗಿ ಮುಂದೆ ಬರಬೇಕು. ಬಹು ದುಬಾರಿಯ ಚಿಕಿತ್ಸೆಗಾಗಿ ಹಣಸಹಾಯ ಮಾಡಿದರೆ ಬಡವರಿಗೆ ಇದರಿಂದಾಗಿ ಸಹಾಯವಾಗುತ್ತದೆ ಎಂದು ಡಾ. ರಮೇಶ್ ಹೇಳಿದರು.