ಶಿವಮೊಗ್ಗ-ತಾಳಗುಪ್ಪ ಬ್ರಾಡ್ ಗೇಜ್ ಕಳಪೆ, ದೂರು
ಶಿವಮೊಗ್ಗ ಜಿಲ್ಲಾ ಸಂಸದ ಬಿ.ವೈ.ರಾಘವೇಂದ್ರ ಅವರು ಸಾಗರಕ್ಕೆ ಭೇಟಿ ನೀಡಿದಾಗ ವಾಜಪೇಯಿ ಅಭಿಮಾನಿಗಳ ಸಂಘದ ಸದಸ್ಯರು ರೈಲ್ವೇ ಬ್ರಾಡ್ಗೇಜ್ ಕಾಮಗಾರಿಯಲ್ಲಿ ಸಾಗರ ರೈಲ್ವೇ ನಿಲ್ದಾಣ ಮತ್ತು ಬಾಳೆಗುಂಡಿ ರೈಲ್ವೇ ನಿಲ್ದಾಣದ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಸೂಕ್ತ ಗಮನಹರಿಸುವಂತೆ ಮನವಿ ಸಲ್ಲಿಸಿರುವ ಕಾರಣ ಸಂಸದರು ರೈಲ್ವೇ ಇಲಾಖೆಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದರು.
ವಾಜಪೇಯಿ ಅಭಿಮಾನಿಗಳ ಬಳಗದ ಸದಸ್ಯರು ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ದೀರ್ಘಕಾಲದ ದೂರದೃಷ್ಟಿ ಯೋಜನೆ ಮೂರು ವರ್ಷದೊಳಗೆ ನಿರ್ನಾಮವಾಗುವ ಸಂಭವವಿದ್ದು, ಉದ್ಘಾಟನೆಗೂ ಮೊದಲೇ ಬಿರುಕುಬಿಟ್ಟಿರುವ ರೈಲ್ವೇ ನಿಲ್ದಾಣದ ಪ್ಲಾಟ್ಫಾರ್ಮ್ ಬಗ್ಗೆ ಅಧಿಕಾರಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ರೈಲ್ವೇ ಇಲಾಖಾ ತಜ್ಞರ ತಂಡ ಸದ್ಯದಲ್ಲಿಯೇ ಸಾಗರ ರೈಲ್ವೇ ನಿಲ್ದಾಣ ಮತ್ತು ಬಾಳೆಗುಂಡಿ ರೈಲ್ವೇ ನಿಲ್ದಾಣಗಳ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದಾಗಿ ಕುಲದೀಪ್ ಚತುರ್ವೇದಿ ಪತ್ರಮುಖೇನ ತಿಳಿಸಿದ್ದಾರೆ ಎಂದು ವಾಜಪೇಯಿ ಬಳಗದ ಅಧ್ಯಕ್ಷ ನಾಗರಾಜ್ ಪೈ ಮತ್ತು ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಡು ಮಾಧ್ಯಮಗಳಿಗೆ ತಿಳಿಸಿದ್ದಾರೆ.