ಬಿಜೆಪಿಗೆ ಸಡ್ಡು ಹೊಡೆದ ಸಿಎಂ, ರಾಜೀನಾಮೆಗೆ ನಕಾರ
ಇದಕ್ಕೆ ಪೂರಕವಾಗಿ "ಸಿಎಂ ವರಿಷ್ಠರ ಆದೇಶಕ್ಕೆ ತಲೆಬಾಗುತ್ತಾರೆ" ಎಂದು ವೆಂಕಯ್ಯನಾಯ್ಡು ಹೇಳಿದ್ದಾರೆ. ಆದರೆ, ರಾಜೀನಾಮೆ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಸಿಎಂ ಪುನರುಚ್ಚರಿಸಿದ್ದಾರೆ. ಇಂದು ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಿ ಯಡಿಯೂರಪ್ಪ ಮಾತನಾಡಲಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದ ಕಾಲದಲ್ಲಿ ನಡೆದಿರುವ ಹಗರಣಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಮೆತ್ತಗಾದ ಸಿಎಂ?: ಕಳೆದ ಎರಡು ದಿನ, ಮಾಧ್ಯಮಗಳ ಮುಂದೆ ಘರ್ಜಿಸುತ್ತಿದ್ದ ಯಡಿಯೂರಪ್ಪ ಅವರು ಇಂದು ಯಾಕೋ ಬಹಳ ಮೃದುವಾಗಿ ಮಾತನಾಡುತ್ತಿದ್ದರು. ದೆಹಲಿಯ ಹವಾಮಾನಕ್ಕೆ ಸಿಎಂ ಗಂಟಲು ಕಟ್ಟಿಕೊಂಡಿರುವ ಕಾರಣ, ಮೆದು ದನಿಯಲ್ಲಿ ಸಿಎಂ ಮತ್ತೆ ರಾಜೀನಾಮೆ ವಿಷಯವನ್ನು ತಳ್ಳಿಹಾಕಿದರು. ಇದೆಲ್ಲಾ ಮಾಧ್ಯಮದವರ ಸೃಷ್ಟಿ, ನಾನು ರಾಜೀನಾಮೆ ನೀಡಿಲ್ಲ, ನೀಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸೋಮವಾರ ಇಡೀ ದಿನ ಮಾಧ್ಯಮಗಳಿಗೆ ದರ್ಶನ ನೀಡದ ಮುಖ್ಯಮಂತ್ರಿಗಳು ಸಂಜೆ ಪುಟ್ಟಪರ್ತಿಯಿಂದ ಪ್ರಧಾನಿ ಡಾ.ಮನಮೋಹನ್ಸಿಂಗ್ ಅವರ ಜತೆ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳಸಿದರು. ಸಂಜೆ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು. ರಾಜಕೀಯ ಬೆಳವಣಿಗೆ ಮತ್ತು ನಿರಂತರ ಪ್ರವಾಸದಿಂದ ತೀವ್ರ ಬಳಲಿದ್ದರೂ, ಆತ್ಮವಿಶ್ವಾಸದಿಂದ ತುಂಬಿತುಳುಕಿದ್ದ ಸಿಎಂ ನಿರಾಳವಾಗಿ ಮಾತನಾಡಿದ್ದು, ಮಾಧ್ಯಮದವರ ಅಚ್ಚರಿಗೆ ಕಾರಣವಾಯಿತು.