ರಾಜೀನಾಮೆ ಕೇಳಿದ್ರೆ ಪಕ್ಷಕ್ಕೆ ಟಾಟಾ ಹೇಳುವೆ : ಯಡ್ಡಿ
ಸಚಿವರಾಜ ವಿ ಎಸ್ ಆಚಾರ್ಯ, ಆರ್ ಅಶೋಕ್ ಹಾಗೂ ಪಕ್ಷದ ವಕ್ತಾರ ಧನಂಜಯ್ ಕುಮಾರ್ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಇಳಿಸುವ ಮಾತೇ ಇಲ್ಲ. ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳುತ್ತೇವೆ. ನಾಳೆ ವೇಳೆಗೆ ಎಲ್ಲ ಸಮಸ್ಯೆಯೂ ತಿಳಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಕೂಡಾ ಇದೇ ರಾಗ ಹಾಡಿದ್ದಾರೆ.
ಇನ್ನೊಂದಡೆ ಸಂಸತ್ತಿನ ಅಧಿವೇಶನ ಆರಂಭವಾಗಿದ್ದು, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ವಜಾಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಸಂಸದರು ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ, ಪುಟ್ಟಪುರ್ತಿಗೆ ಹೋಗಿದ್ದ ಮುಖ್ಯಮಂತ್ರಿಗಳು ಮತ್ತೆ ಅಜ್ಞಾತವಾಸಕ್ಕೆ ತೆರಳಿದ್ದಾರೆ. ದಿಲ್ಲಿ ನಾಯಕರ ಕೈಗೆ ಸಿಗುತ್ತಿಲ್ಲ.
ನನ್ನ ರಾಜೀನಾಮೆ ಪಡೆಯುವುದಾದರೆ ಚುನಾವಣೆಗೆ ಹೋಗೋಣ, ಬೇರೆ ಯಾರನ್ನೂ ಮುಖ್ಯಮಂತ್ರಿಯನ್ನಾಗಿಸಲು ನಾನು ಬಿಡುವುದಿಲ್ಲ. ಕಾರಣವೆಂದರೆ, 2008ರಲ್ಲಿ ನನ್ನ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ನನ್ನಿಂದಾಗಿ ಬಿಜೆಪಿ 110 ಸ್ಥಾನ ಗಳಿಸಿದೆ. ಹೀಗಾಗಿ ಅವಧಿಯನ್ನು ಪೂರ್ಣಗೊಳಿಸುವವರೆಗೂ ನಾನು ಪೀಠ ಬಿಟ್ಟು ಕದಲುವುದಿಲ್ಲ ಎನ್ನುವುದು ಯಡಿಯೂರಪ್ಪ ಅವರ ಪಟ್ಟು. ಅಂತೂ ಮಿಕ್ಕಿ ಪೀಠ ಬಿಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾದರೆ ಪಕ್ಷದಿಂದ ಹೊರಹೋಗುವೆ ಎಂಬ ಬೆದರಿಕೆಯನ್ನೂ ಯಡಿಯೂರಪ್ಪ ಹಾಕಿದ್ದಾರೆ ಎಂದು ವಾಹಿನಿಗಳು ಪ್ರಸಾರ ಮಾಡತೊಡಗಿವೆ.