ಸಿಡಿ ಎಲ್ಲಾ ನಕಲಿ : ಜಿಜೆ ರೆಡ್ಡಿ ಕಿಡಿಕಿಡಿ
ಈ ವಿವಾದಿತ ಸಿಡಿ ಫ್ಯಾಬ್ರಿಕೇಟೆಡ್ ಆಗಿದ್ದು, ನನ್ನನ್ನು ಸಿಕ್ಕಿಹಾಕಿಸುವ ಉದ್ದೇಶದಿಂದಲೇ ರೂಪಿಸಲಾಗಿದೆ ಎಂದು ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಪ್ರತ್ಯಾರೋಪ ಮಾಡಿದ್ದಾರೆ. ಭಾನುವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ವಿರದ್ಧ ರೆಡ್ಡಿ ಹರಿಹಾಯ್ದರು.
ಮಾಧ್ಯಮಗಳ ಬಗ್ಗೆ ಜನರಲ್ಲಿ ಅಪಾರವಾದ ವಿಶ್ವಾಸವಿತ್ತು. ಇತ್ತೀಚಿನ ದಿನಗಳಲ್ಲಿ ಸರಣಿಯಲ್ಲಿ ಹಗರಣಗಳು ದಾಖಲೆಗಳ ಸಮೇತ ಪ್ರಕಟ ಆಗುತ್ತಿರುವ ಹಿನ್ನಲೆಯಲ್ಲಿ ನಂಬಿಕೆ ಮೂಡಿತ್ತು. ಪ್ರಸ್ತುತ ರಾಜಕೀಯದಲ್ಲಿ ಮಾಧ್ಯಮಗಳ ಪಾತ್ರ ಕುರಿತು ಜನಸಾಮಾನ್ಯರಲ್ಲಿ ಗೌರವ ಮೂಡಿತ್ತು. ಇಂಥಾ ಪರಿಸ್ಥಿತಿಯಲ್ಲಿ ಸಿಡಿಯನ್ನು ಬಿಡುಗಡೆ ಮಾಡುವ ಅನಿವಾರ್ಯವೇನಿತ್ತು? ಅವಶ್ಯಕತೆ ಏನಿತ್ತು? ಎನ್ನುವುದೇ ಜನರ ಪ್ರಶ್ನೆ ಆಗಿದೆ ಎಂದು ಹೇಳಿದರು.
ವಿಡಿಯೋ : ರಹಸ್ಯ ಮಾತುಕತೆ ಸಿಡಿ ಅಸಲಿಯಲ್ಲ ರೆಡ್ಡಿ ಪ್ರತಿಕ್ರಿಯೆ
ನಮ್ಮ ತೇಜೋವಧೆಗೆ ಅನೇಕರು, ವಿವಿಧ ಸಂದರ್ಭಗಳಲ್ಲಿ ನಾನಾ ರೀತಿಗಳಲ್ಲಿ ಪ್ರಯತ್ನಿಸಿದ್ದಾರೆ. ಅದರಲ್ಲಿ ಇದೂ ಒಂದು ರೀತಿಯ ಪ್ರಯತ್ನ. ಸಿಡಿಯಲ್ಲಿ ಇರುವ ಮಾಹಿತಿ ಪ್ರಕಾರ ಆಗಸ್ಟ್ 11ರಂದು ನನ್ನ ಸಹೋದರ ಜಿ. ಸೋಮಶೇಖರರೆಡ್ಡಿಯ ಪುತ್ರನ ಹುಟ್ಟುಹಬ್ಬ ಇರಬೇಕು. ಪರಿಶೀಲಿಸುವೆ ಎಂದು ಹೇಳುವೆ.
ಜನವರಿ 13ರಂದು ಕೆ.ಸಿ. ಕೊಂಡಯ್ಯ ಅವರು ಲಾಭದಾಯಕ ಹುದ್ದೆ ವಿವಾದದ ದೂರನ್ನು ರಾಜ್ಯಪಾಲರಲ್ಲಿ ದಾಖಲಿಸಿದರು. ಜನವರಿ 19ರಂದು ರಾಜ್ಯಪಾಲರು ನೋಟೀಸ್ ಜಾರಿ ಮಾಡಿದರು. ಜನವರಿ 28ರಂದು ನಾವು ಉತ್ತರ ನೀಡಿದೆವು. ರಾಜ್ಯಪಾಲರು ಈ ಪ್ರಕರಣವನ್ನು ಜೂನ್ 3ರಂದು ರಾಜ್ಯ ಚುನಾವಣಾ ಆಯೋಗಕ್ಕೆ ವರ್ಗ ಮಾಡಿದರು. ಚುನಾವಣಾ ಆಯೋಗ ಜೂನ್ 23ರಂದು ನಮಗೆ ನೋಟೀಸ್ ಜಾರಿ ಮಾಡಿತು. ಈ ಮಧ್ಯೆ ನಾವು ಜುಲೈ 26ರಂದು ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದೆವು. ಇಂತಹ ಪರಿಸ್ಥಿತಿಯಲ್ಲಿ ರಾಜ್ಯಪಾಲರ ನೆರವು, ಮಧ್ಯಸ್ಥಿಕೆ, ಪರವಾದ ಅಭಿಪ್ರಾಯ ಮಂಡಿಸಲು ಲಾಭಿನಡೆಸುವ ಅಗತ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಅನೌಪಚಾರಿಕವಾಗಿ ಮಾತನಾಡುವಾಗ, ನಾಳೆ ಸಂಜೆ ವೇಳೆಗೆ ರಾಜಕೀಯ ಗೊಂದಲಕ್ಕೆ ಕೊನೆ ಬೀಳಲಿದೆ, ಹೊಸ ಸಿಎಂ ಕಾಣಿಸಿಕೊಳ್ಳುತ್ತಾರೆ ಎಂದು ಜನಾರ್ದನ ರೆಡ್ಡಿ ಹೇಳಿ ಕೌತುಕ ಮೂಡಿಸಿದರು.