ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರ ನಿರ್ನಾಮ ನನ್ನ ಗುರಿ : ಯಡಿಯೂರಪ್ಪ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ನ. 20 : ದಿಲ್ಲಿ ನಾಯಕರೊಂದಿಗೆ ಚರ್ಚೆ ನಡೆಸಿ ರಾಜ್ಯಕ್ಕೆ ಆಗಮಿಸಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ. ಬಿಜಾಪುರದಲ್ಲಿ ಭಾಗ್ಯಲಕ್ಷ್ಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಇತ್ತೀಚೆಗಿನ ರಾಜಕೀಯ ಬೆಳವಣಿಗೆಗೆ ಬಗ್ಗೆ ನೊಂದು ನುಡಿದಿದ್ದು, ಕೆಲ ಹೊತ್ತು ಗದ್ಗದಿತರಾದಂತೆ ಕಂಡುಬಂದಿತು.

ಡಿನೋಟಿಫಿಕೇಷನ್ ಸೇರಿದಂತೆ ಅನೇಕ ಹಗರಣದ ಸುಳಿಯಲ್ಲಿರುವ ಸಿಲುಕಿರುವ ಸರಕಾರವನ್ನು ಬೆನ್ನು ಬಿಡದೆ ಕಾಡುತ್ತಿರುವ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಬಗ್ಗೆ ಹುಬ್ಬಳ್ಳಿ, ಬಾಗಲಕೋಟೆ ಮತ್ತು ವಿಜಾಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಏಕವಚನದಲ್ಲಿ ದಾಳಿ ನಡೆಸಿದರು. ಕರ್ನಾಟಕಕ್ಕೆ ಕಂಟಕವಾಗಿರುವ ಈ ಅಪ್ಪ ಮಕ್ಕಳನ್ನು ನಿರ್ನಾಮ ಮಾಡುವುದೇ ನನ್ನ ಮುಂದಿನ ಗುರಿ ಎಂದು ಅವರು ಅಧಿಕೃತ ಘೋಷಣೆ ಮಾಡಿದರು.

ಅಪ್ಪ ಮಕ್ಕಳು ರಾಜ್ಯವನ್ನು ಹೇಗೆಲ್ಲಾ ಹಾಳು ಮಾಡಿದರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇದೀಗ ಜನಪ್ರಿಯ ಸರಕಾರವನ್ನು ಹಿಂಬಾಗಿಲಿನ ಮೂಲಕ ಪತನಗೊಳಿಸಲು ಸಂಚು ರೂಪಿಸುತ್ತವೆ ಎಂದ ಅವರು, ಲಜ್ಜೆಗೆಟ್ಟ ಮಾಜಿ ಪಿಎಂ, ನಿನಗೆ ಏನಾದರೂ ನೈತಿಕತೆ, ಮಾನ ಮರ್ಯಾದೆ ಇದೆಯೇ ? ನೀನು ಏನೆಲ್ಲ ಮೋಸ ಮಾಡಿದೆ. 20/20 ಸರಕಾರದಲ್ಲಿ ಏನೇನೆಲ್ಲಾ ಆಟ ಆಡಿದೆ ಎಂಬುದು ಜನರಿಗೆ ಗೊತ್ತಿದೆ. ನಿನ್ನ ಆಟ ಈ ಯಡಿಯೂರಪ್ಪನ ಮುಂದೆ ನಡೆಯಲ್ಲ ಎಂದು ಗುಡುಗಿದರು.

ಒಳಗೊಂದು ಹೊರಗೊಂದು ಆಟ ಆಡ್ತಿಯಾ? ನಮ್ಮ ಸಂಸದರನ್ನು ಕರೆದು ಕಾಂಗ್ರೆಸ್ ನಾಶ ಮಾಡಬೇಕು, ನಮಗೆ ಬೆಂಬಲ ಕೊಡಿ ಅಂತ ಕೇಳೋದು. ನಾಯಕತ್ವ ಬದಲಾಯಿಸೋಣ ನಮಗೆ ಬೆಂಬಲ ಕೊಡಿ ಅಂತ ಕಾಂಗ್ರೆಸ್ ಮುಂದೆ ಅಂಗಲಾಚುವುದು. ನಾಚಿಕೆ ಆಗುವುದಿಲ್ಲವೇ ನಿನಗೆ ಎಂದು ದೇವೇಗೌಡರನ್ನು ನೇರವಾಗಿ ಹೆಸರಿಸಿ ದಾಳಿ ನಡೆಸಿದರು. ಕಾಂಗ್ರೆಸ್ ಹೈಕಮಾಂಡ್ ಮುಖಕ್ಕೆ ಮಂಗಳಾರತಿ ಮಾಡಿದೆ. ಆದರೂ ನಿನ್ನ ಕೆಟ್ಟ ಬುದ್ಧಿಯನ್ನು ಬಿಡುತ್ತಿಲ್ಲ. ಈ ಯಡಿಯೂರಪ್ಪ ಇನ್ನು ಮುಂದೆ ಸುಮ್ಮನೆ ಕೂರಲ್ಲ. ನಿನ್ನದಾಗುತ್ತೂ ನನ್ನದಾಗುತ್ತೂ ನೋಡೋಣ ಎಂದು ಸವಾಲು ಹಾಕಿದರು.

ದೇವೇಗೌಡರ ಪ್ರತಿಕ್ರಿಯೆ : ಯಡಿಯೂರಪ್ಪ ಅವರಿಗೆ ತಲೆ ಕೆಟ್ಟಿದೆಯಾ? ಮತಿಭ್ರಮಣೆ ಆಗಿರುವಂತೆ ಮಾತನಾಡುತ್ತಿದ್ದಾರೆ. 50 ವರ್ಷ ರಾಜಕೀಯ ಮಾಡಿದ್ದೇನೆ. ಇಂತಹ ಅನೇಕ ಮಂದಿಯನ್ನು ನೋಡಿರುವೆ. ನನ್ನನ್ನು ನೋಡಿಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಹೀಗೆ ಹೇಳಿದ ಅನೇಕರು ಮೂಲೆ ಏನೇನಾಗಿದ್ದಾರೆ ಎನ್ನುವುದನ್ನು ನಾನು ಹೇಳಬೇಕಿಲ್ಲ. ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಕೆಳಗಿಳಿಸುವುದು ನಮ್ಮ ಏಕೈಕ ಗುರಿ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಪ್ರತಿಕ್ರಿಯೆ : ನಮ್ಮ ಹೋರಾಟ ಮುಖ್ಯಮಂತ್ರಿ ವಿರುದ್ಧವೇ ಹೊರತು ಯಡಿಯೂರಪ್ಪ ಅವರ ವಿರುದ್ಧ ಅಲ್ಲ. ಮುಖ್ಯಮಂತ್ರಿ ಅನೇಕ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೂ ನಾವು ವಿರಮಿಸುವುದಿಲ್ಲ. ದೇವೇಗೌಡ ಕುಟುಂಬದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿದ್ದಾರೆ. ಇಂತಹ ಜನರನ್ನು ನಾವು ಬಹಳ ಜನರನ್ನು ನೋಡಿದ್ದೇವೆ. ಇದಕ್ಕೆ ಸೊಪ್ಪ ಹಾಕುವ ಜಾಯಮಾನ ನಮ್ಮದಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X