ಮೋದಿ ಮೋಡಿಗೆ ಸಿಲುಕಿದ ಮುರುಗೇಶ್ ನಿರಾಣಿ
ಜನವರಿ 12,13ರಂದು 'ಆಕರ್ಷಕ ಗುಜರಾತ್' ಶೀರ್ಷಿಕೆಯಡಿ ಆಯೋಜಿಸಿಲಾಗಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ ನಿಮಿತ್ತ ಗುರುವಾರ ನಗರದಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸಿ, ಬಂಡವಾಳ ಹೂಡಿಕೆಗೆ ಆಮಂತ್ರಣ ನೀಡಿದರು. ಕರ್ನಾಟಕದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಗುಜರಾತ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಎ.ಕೆ.ಜೋತಿ, ಕೈಗಾರಿಕೆ ಮತ್ತು ಗಣಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಸಾಹು,ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಹರಿ ಭಾರ್ತಿಯ,ಸಿಐಐ ಪ್ರಧಾನ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಮೊದಲಾದವರು ಉಪಸ್ಥಿತರಿದ್ದರು.
ಸುಭಿಕ್ಷ ಗುಜರಾತ್ : 2009ರ ಶೃಂಗಸಭೆಯಲ್ಲಿ 47 ರಾಷ್ಟ್ರಗಳು ಭಾಗವಹಿಸಿ, 240 ಶತಕೋಟಿ ಬಂಡವಾಳ ಹೂಡಿಕೆ ಮಾಡಿವೆ. ಗುಜರಾತ್ನಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದ್ದು, ದಿನದ 24 ಗಂಟೆಗಳ ಕಾಲ ವಿದ್ಯುತ್ ಲಭ್ಯವಾಗಲಿದೆ. ಜತೆಗೆ ನೀರಿಗೂ ಬರವಿಲ್ಲ. ಮಳೆ ನೀರು ಕೊಯ್ಲು ಪದ್ಧತಿಯನ್ನು ರಾಜ್ಯದಲ್ಲಿ ಜನಾಂದೋಲನವಾಗಿ ರೂಪಿಸಲಾಗಿದ್ದು,ಇದರಿಂದಾಗಿ ಅಂತರ್ಜಲ ಹೆಚ್ಚಳವಾಗಿದೆ ಎಂದರು.
ಕೃಷಿ, ಶಿಕ್ಷಣಕ್ಕೆ ಆದ್ಯತೆ: ಕೃಷಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿಲಾಗಿದ್ದು, ಬಿತ್ತನೆ ಕಾರ್ಯ ಆರಂಭಕ್ಕೂ ಮುನ್ನ ಮಣ್ಣು ಪರೀಕ್ಷೆ ನಡೆಸುವ ಸಲುವಾಗಿ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ನೀಡಲಾಗಿದೆ. ತಿಂಗಳು ಪೂರ್ತಿ ಸಾವಿರಾರು ಸರ್ಕಾರಿ ನೌಕರರು ಹಳ್ಳಿ ಹಳ್ಳಿಗೆ ತೆರಳಿ ರೈತರ ಸಮಸ್ಯೆ ಆಲಿಸಿ, ಪರಿಹಾರ ಸೂಚಿಸಿಬರುತ್ತಾರೆ .ಹೀಗಾಗಿಯೇ ಕೃಷಿ ಕ್ಷೇತ್ರದಲ್ಲಿ ರಾಷ್ಟ್ರದ ಜಿಡಿಪಿ ದರ ಶೇ.3ರಷ್ಟಿದ್ದರೆ, ಗುಜರಾತ್ ರಾಜ್ಯದ ಜಿಡಿಪಿ ದರ ಶೇ.12.8 ರಷ್ಟಿದೆ ಎಂದು ಹೆಮ್ಮೆಯಿಂದ ಹೇಳಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಸರ್ಕಾರ ವಿಶೇಷ ಒತ್ತು ನೀಡಿರುವುದರಿಂದ ಶಾಲೆ ಬಿಡುವವರ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಈ ಹಿಂದೆ ಶಾಲೆ ಬಿಡುವವರ ಪ್ರಮಾಣ ಶೇ.14ರಷ್ಟಿದ್ದರೆ, ಇದೀಗ ಶೇ.2ಕ್ಕೆ ಇಳಿದಿದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪೋಷಕರ ಮನವೊಲಿಸಲು ಜೂನ್ ನಲ್ಲಿ ರಾಜ್ಯದಲ್ಲಿ ಶೇ.45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ ಮನೆ ಮನೆಗೆ ತೆರಳಿ ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ.
ಪ್ರತ್ಯೇಕ ಇಲಾಖೆ: ಹವಾಮಾನ ಬದಲಾವಣೆ ಆಧ್ಯಯನಕ್ಕಾಗಿಯೇ ಪ್ರತ್ಯೇಕ ಇಲಾಖೆ ಸ್ಥಾಪಿಸಿರುವ ಏಕೈಕ ರಾಜ್ಯ ಗುಜರಾತ್ ಎಂಬ ಹೆಮ್ಮೆ ನಮಗಿದೆ ಎಂದರು. ಫೊರೇನ್ಸಿಕ್ ವಿಭಾಗದ ಅಧ್ಯಯನಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ.
ಮೋದಿ ಆಫೀಸ್ ಗೆ ಐಎಸ್ಒ ಪ್ರಮಾಣ: ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಕಾರ್ಮಿಕರ ಕೊರತೆ ಎದುರಾಗಿಲ್ಲ. ಈ ಎಲ್ಲ ಕಾರಣಗಳಿಂದ ಮುಖ್ಯಮಂತ್ರಿಯವರ ಕಚೇರಿ ಸೇರಿದಂತೆ ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳೂ ಐಎಸ್ಒ ಪ್ರಮಾಣ ಪಡೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಟಾಟಾ ನ್ಯಾನೋ ಕಾರು, ಸ್ಟೀಲ್ಪೈಪ್, ಸಿಮೆಂಟ್ ಉತ್ಪಾದನೆಯಲ್ಲಿ ಗುಜರಾತ್ ರಾಜ್ಯ ಮುಂಚೂಣಿಯಲ್ಲಿದೆ. ಇದರಿಂದಾಗಿ ಇಡೀ ದೇಶದ ರಫ್ತು ವಹಿವಾಟಿನಲ್ಲಿ ಗುಜರಾತ್ನ ಪಾಲು ಶೇ.22ರಷ್ಟಿದೆ. ಈ ಎಲ್ಲ ಕಾರಣಗಳಿಂದ ಗುಜರಾತ್ ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣವಾಗಿದ್ದು, ಉದ್ಯಮಿಗಳು ಹೂಡಿಕೆಗೆ ಮುಂದೆಬರುವಂತೆ ಮುಕ್ತ ಆಹ್ವಾನ ನೀಡಿದರು.