ಭೂ-ಹಗರಣ : ಲೋಕಾಯುಕ್ತಕ್ಕೆ ಜೆಡಿಎಸ್ ದೂರು
ಪಕ್ಷದ ವಕ್ತಾರ ವೈಎಸ್ ವಿ ದತ್ತ ಹಾಗೂ ಎಂಸಿ ನಾಣಯ್ಯ ಗುರುವಾರ ಸಾಯಂಕಾಲ ಲೋಕಾಯುಕ್ತ ಕಚೇರಿಗೆ ತೆರಳಿ, ದೂರು ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ಬಿಎಸ್ ರಾಘವೇಂದ್ರ, ಬಿಡಿಎ ಹಾಗೂ ಸಿಎಂ ಕಚೇರಿಯ ಅಧಿಕಾರಿಗಳನ್ನು ಪ್ರತಿವಾದಿಯಾಗಿ ಮಾಡಲಾಗಿದೆ. ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತದಿಂದ ಮುಖ್ಯಮಂತ್ರಿ ರಾಜ್ಯದ ಬೊಕ್ಕಸಕ್ಕೆ ಸುಮಾರು ಐದು ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಮಾಡಿದ್ದಾರೆ ಎಂದು ಜೆಡಿಎಸ್ ಪ್ರತಿಪಾದಿಸಿದೆ.
ರಾಚೇನಹಳ್ಳಿ, ನಾಗರಬಾವಿಯಲ್ಲಿ ಸಿಎಂ ಮಕ್ಕಳಾದ ರಾಘವೇಂದ್ರ, ವಿಜಯೇಂದ್ರ ಒಡೆತನಕ್ಕೆ ಸೇರಿದ ಕಂಪನಿಗಳಲ್ಲಿ ಷೇರು ಹೂಡಿಕೆ ಮಾಡಿದವರಿಗೆ ಅಕ್ರಮವಾಗಿ ಭೂಮಿ ಮಂಜೂರು ಸೇರಿದಂತೆ 8 ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ನೀಡಲಾಗಿದೆ. ಜೆಡಿಎಸ್ ವಕ್ತಾರ ವೈಎಸ್ ವಿ ದತ್ತ ಸುದ್ದಿಗಾರರ ಜತೆ ಮಾತನಾಡಿ, ಸುಮಾರು 580 ಪುಟಗಳ ದಾಖಲೆಯನ್ನು ಲೋಕಾಯುಕ್ತರಿಗೆ ಸಲ್ಲಿಸಿದ ದೂರಿನ ಜತೆ ಲಗತ್ತಿಸಲಾಗಿದೆ.
ಪೂರಕ ಮಾಹಿತಿ ಒದಗಿಸಲು ಕಾಲಾವಕಾಶ ಕೇಳಲಾಗಿದೆ. ಬಿಜೆಪಿ ಸರಕಾರ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದು, ತಡೆಯದಿದ್ದರೆ ಜನತೆ ನಮ್ಮನ್ನು ಕ್ಷಮಿಸುವುದಿಲ್ಲ. ಮುಖ್ಯಮಂತ್ರಿಯೇ ಹಗರಣದ ರೂವಾರಿ ಆಗಿರುವುದರಿಂದ, ಸ್ವಯಂಪ್ರೇರಿತ ತನಿಖೆ ನಡೆಸಲು ಲೋಕಾಯುಕ್ತರಿಗೆ ಸಾಧ್ಯವಿಲ್ಲ.ಈ ಕಾನೂನು ತೊಡಕನ್ನು ನಿವಾರಿಸಲು ದೂರು ನೀಡಿದ್ದೇವೆ ಎಂದರು.