ಬಾಬಾ ರಾಮ್ ದೇವ್ ಗೆ 'Z' ಪ್ಲಸ್ ಭದ್ರತೆ ಬೇಕಂತೆ
ಬಾಬಾ ರಾಮದೇವ್ ಯೋಗ ಕಲಿಕೆ ಜತೆಗೆ ಇದೀಗ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನೂ ಆರಂಭಿಸಿದ್ದಾರೆ. ಹಾಗೆಯೇ ಭಾರತದ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ, ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ರಾಮದೇವ್ ಎದುರಾಳಿಗಳ ಟಾರ್ಗೆಟ್ ಆಗಿ ಬದಲಾಗಿರುವುದರಿಂದ, ಅವರಿಗೆ ಝಡ್ ಪ್ಲಸ್ ಮಾದರಿ ಭದ್ರತೆ ಒದಗಿಸಬೇಕೆಂದು ಹರಿದ್ವಾರ ಮೂಲದ ಪತಾಂಜಲಿ ಯೋಗಪೀಠದ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಮದೇವ್ ಅವರು, ಶೀಘ್ರದಲ್ಲೇ ತಮ್ಮ ಹೊಸ ರಾಜಕೀಯ ಪಕ್ಷ ಭಾರತ್ ಸ್ವಾಭಿಮಾನ ಟ್ರಸ್ಟ್ ಅಸ್ತಿತ್ವಕ್ಕೆ ತರಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಅವರ ಎದುರಾಳಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಮ್ದೇವ್ಗೆ ಝಡ್ಪ್ಲಸ್ ಭದ್ರತೆ ಅಗತ್ಯ ಎಂದು ಬಾಲಕೃಷ್ಣ ಅವರು ಪ್ರತಿಪಾದಿಸಿದ್ದಾರೆ.
ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಾಸ್ ತಂದು ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸುವ ಮಹತ್ತರ ಉದ್ದೇಶವನ್ನು ಬಾಬಾ ರಾಮ್ ದೇವ್ ಅವರ ಪಕ್ಷ ಹೊಂದಿದೆ. ಸ್ವದೇಶಿ ವಸ್ತು ಬಳಕೆ, ವಿದೇಶಿ ಕಂಪೆನಿಗಳ ವಿರುದ್ಧ ಅಭಿಯಾನ ಆರಂಭಿಸಿರುವ ಯೋಗ ಗುರು, ಉಚಿತವಾಗಿ ಎಲ್ಲರಿಗೂ ಯೋಗ ಕಲಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.