ಭೂಹಗರಣ : ನ್ಯಾಯಾಂಗ ತನಿಖೆಗೆ ಬಿಜೆಪಿ ಆದೇಶ
ಇದೇ ಭೂಹಗರಣ ವಿವಾದ ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿದ ನಂತರ ವಿವಾದ ಕುರಿತು ಚರ್ಚಿಸಲು ಬಿಜೆಪಿ ಹೈಕಮಾಂಡ್ ಇಂದು ಸಂಜೆ ನಡೆಸಿದ ಸಭೆಯಲ್ಲಿ ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್, ಅನಂತ್ ಕುಮಾರ್ ಮುಂತಾದ ಹಿರಿಯ ನಾಯಕರು ಭಾಗವಹಿಸಿದ್ದರು. ಇದರ ಬೆನ್ನ ಹಿಂದೆಯೇ, ಭೂಕಬಳಿಕೆ ಆರೋಪಕ್ಕೆ ತುತ್ತಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರನ್ನು ಕೂಡಲೆ ನವದೆಹಲಿಗೆ ಬರಬೇಕೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಬುಲಾವ್ ನೀಡಿದ್ದಾರೆ.
ಆರೋಪ ನಿರಾಕರಣೆ : ಭೂಕಬಳಿಕೆಯ ಆರೋಪಗಳನ್ನೆಲ್ಲಾ ಯಡಿಯೂರಪ್ಪ ಅಲ್ಲಗಳೆದಿದ್ದಾರೆ. ನಾಯಕತ್ವ ಬದಲಾವಣೆ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕೆಂಬ ವಿರೋಧ ಪಕ್ಷಗಳ ಆಗ್ರಹವನ್ನು ಯಡಿಯೂರಪ್ಪ ತಳ್ಳಿಹಾಕಿದ್ದು, ಐದು ವರ್ಷ ಪೂರೈಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೀಗ ಉಂಟಾಗಿರುವ ರಾಜಕೀಯ ಬೆಳವಣಿಗೆ ಸರಳವಾಗಿಲ್ಲ. ಮುಖ್ಯಮಂತ್ರಿ ಗದ್ದುಗೆ ಅಲುಗಾಡುತ್ತಿರುವುದಂತೂ ನಿಜ. ಕುರ್ಚಿ ಉಳಿಸಿಕೊಳ್ಳಲು ಯಡಿಯೂರಪ್ಪ ಎಲ್ಲ ಅಸ್ತ್ರಗಳನ್ನು ಬಳಸಲು ಸಿದ್ಧರಾಗಿದ್ದಾರೆ. ಅವಶ್ಯಕತೆ ಬಿದ್ದರೆ ಪಡೆದಿರುವ ಭೂಮಿಯನ್ನೆಲ್ಲ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ಸಂಗತಿಗಳನ್ನು ಅವರೆದುರಿಗೆ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಪದಚ್ಯುತಿ ಗ್ಯಾರಂಟಿ? : ದಿಲ್ಲಿಯಲ್ಲಿ ಪ್ರಧಾನಮಂತ್ರಿ ಕುರ್ಚಿ ಹಿಡಿದು ಎಳೆದಾಡುತ್ತಿರುವ ಬಿಜೆಪಿ ನಾಯಕರು, ಭೂ-ಹಗರಣದ ಆರೋಪ ಹೊತ್ತಿರುವ ಯಡಿಯೂರಪ್ಪ ಅವರನ್ನು ಗೌರವದಿಂದ ಪದಚ್ಯುತಿಗೊಳಿಸುವ ಚಿಂತನೆ ನಡೆಸಿದ್ದಾರೆ. ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗೆ ಮುನ್ನವೇ ನಡೆಯಲಿದೆಯೇ? ಅಥವಾ ಚುನಾವಣೆ ನಂತರ ಆಗಲಿದೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ. ಒಟ್ಟಾರೆಯಾಗಿ ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ ಎಂಬ ಮಾತುಗಳು ರೆಕ್ಕೆಪುಕ್ಕ ಪಡೆದಿವೆ.
ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ, ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಆರ್ ಅಶೋಕ್ ಸೇರಿದಂತೆ ಕೆಲ ಸಚಿವರು ನಡೆಸಿರುವ ಭೂ-ಹಗರಣ, ಅಕ್ರಮ ಅವ್ಯವಹಾರಗಳ ಮೂಟೆಯನ್ನು ದೆಹಲಿ ಅಂಗಳಕ್ಕೆ ವರ್ಗಾಯಿಸಲಾಗಿದೆ. ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸುವುದು ಸರಳ ಸಂಗತಿಯಲ್ಲ. ಇನ್ನೊಂದಡೆ ನಾಯಕತ್ವ ಬದಲಾವಣೆ ಮಾಡದಿದ್ದರೆ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇಂತಹ ಅಡಕತ್ತರಿಯೊಳಗೆ ಬಿಜೆಪಿ ವರಿಷ್ಠ ಸಿಕ್ಕಿಹಾಕಿಕೊಂಡಿದ್ದಾರೆ.
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಲಿಂಗಾಯಿತರು ಅಸಮಾಧಾನಗೊಳ್ಳಲಿದ್ದಾರೆ ಎಂಬ ಅರಿವು ವರಿಷ್ಠರಿಗೆ ಇದೆ. ಹೀಗಾಗಿ ಅವರ ಮನಸ್ಸಿಗೆ ನೋವುಂಟು ಮಾಡದೆ ಯಡಿಯೂರಪ್ಪ ಅವರ ಸ್ಥಾನಕ್ಕೆ ಇನ್ನೊಬ್ಬ ಲಿಂಗಾಯಿತರ ನಾಯಕ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡಿದರೆ ಹೇಗೆ ಎಂಬ ಪರ್ಯಾಯ ಚಿಂತನೆಯನ್ನು ಹೈಕಮಾಂಡ್ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ರಾಜ್ಯ ಬಿಜೆಪಿ ಶಕ್ತಿ ಎಂದೇ ಹೆಸರುವಾಸಿಯಾಗಿರುವ ಬಳ್ಳಾರಿ ರೆಡ್ಡಿಗಳ ಮುಖ್ಯಮಂತ್ರಿ ರಕ್ಷಣೆಗೆ ಈವರೆಗೊ ಬಂದಿಲ್ಲ ಎನ್ನುವುದು ಭಾರಿ ಮಹತ್ವ ಪಡೆದಿದೆ. ಗದಗ ಉಸ್ತುವಾರಿ ವಿಷಯದಲ್ಲಿ ಮುಖ್ಯಮಂತ್ರಿಗಳು ನಡೆದುಕೊಂಡ ರೀತಿಯಿಂದ ರೆಡ್ಡಿಗಳು ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಜೊತೆಗೆ ಪಕ್ಷದ ಮುಕ್ಕಾಲು ಶಾಸಕರು ಯಡಿಯೂರಪ್ಪ ವಿರುದ್ಧ ಸಹಿ ಸಂಗ್ರಹ ಮಾಡುತ್ತಿದ್ದಾರೆ ಎಂಬ ಅಂಶವೂ ದಟ್ಟವಾಗಿದೆ. ನ.25ಕ್ಕೆ ಬರಲಿರುವ ಬಿಜೆಪಿ ವರಿಷ್ಠರು ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.