ಪೇಜಾವರ ಶ್ರೀಗಳ ವೈಷ್ಣವ ದೀಕ್ಷೆ ಉದ್ದೇಶವೇನು?
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ದಲಿತರಿಗೆ ನೀಡಲು ಉದ್ದೇಶಿಸಿರುವ ವೈಷ್ಣವ ದೀಕ್ಷೆಯನ್ನು ವಿರೋಧಿಸಿ ಮಂಗಳವಾರ ಉಡುಪಿಯ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ದಲಿತ ಶೂದ್ರ ಸ್ವಾಭಿಮಾನ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೇಜಾವರ ಶ್ರೀಗಳಿಗೆ ಸವಾಲು : ನಿಮ್ಮ ವೈಷ್ಣವ ದೀಕ್ಷೆ ಸ್ವೀಕರಿಸಲು ನಾವೆಲ್ಲ ಸಿದ್ಧರಾಗಿದ್ದೇವೆ. ಆದರೆ ಕೆಲವು ನಿಬಂಧನೆಗಳಿಗೆ ನೀವು ಒಪ್ಪಬೇಕು. ಗೊಲ್ಲ ಜನಾಂಗದ ಕೃಷ್ಣನ ಗರ್ಭಗುಡಿಗೆ ಪ್ರವೇಶ ಮಾಡಲು ದಲಿತರಿಗೆ ಅವಕಾಶ ನೀಡಬೇಕು. ಹಿಂದುಳಿದವರ್ಗದಲ್ಲಿ ಸಾಕಷ್ಟು ಮಂದಿ ವಿದ್ಯಾವಂತರು ಇದ್ದಾರೆ ಅವರಲ್ಲಿ ಒಬ್ಬರನ್ನು ನಿಮ್ಮ ಉತ್ತರಾಧಿಕಾರಿಯಾಗಿ ಸ್ವೀಕರಿಸಬೇಕು. ದಲಿತರೊಂದಿಗೆ ತಾವು ಸಹಭೋಜನ ಮಾಡಬೇಕು. ಈ ಎಲ್ಲ ವಿಚಾರಗಳನ್ನು ಪಾಲಿಸಿದರೆ ನಾವೆಲ್ಲ ನಿಮ್ಮ ದೀಕ್ಷೆ ಸ್ವೀಕರಿಸುತ್ತೇವೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ದ್ವಾರಕಾನಾಥ್ ಪೇಜಾವರ ಶ್ರೀಗೆ ಸವಾಲು ಹಾಕಿದ್ದಾರೆ.
ಉಡುಪಿ ದೇಗುಲ ಬ್ರಾಹ್ಮಣರ ಸ್ವತ್ತಲ್ಲ: ಪೇಜಾವರ ಸ್ವಾಮೀಜಿ ಹಿಂದೂ ಧರ್ಮದ ಹೊರಗಡೆ ಇರುವ ದಲಿತರಿಗೆ ಹಿಂದೂ ದೀಕ್ಷೆ ಕೊಡುವ ಬದಲು, ಬ್ರಾಹ್ಮಣ ಜಾತಿಯ ಒಂದು ಪಂಗಡವಾಗಿರುವ ವೈಷ್ಣವ ದೀಕ್ಷೆ ನೀಡಲು ಮುಂದಾಗಿರುವುದರ ಹಿಂದೆ ರಾಜಕೀಯ ಹುನ್ನಾರ ಅಡಗಿದೆ ಎಂದು ಅವರು ಟೀಕಿಸಿದರು.
ಹಿಂದೂಗಳಿಗೂ ಸೇರಿದ ಕೃಷ್ಣನ ಈ ದೇವಸ್ಥಾನವನ್ನು ಕೇವಲ ಒಂದು ಮತದ ಮಠಕ್ಕೆ ನೀಡಲಾಗಿದೆ. ಉಡುಪಿ ನ್ಯಾಯಾಲಯ, ಮದ್ರಾಸ್ ಹೈಕೋರ್ಟ್, ಸುಪ್ರೀಂ ಕೋರ್ಟ್ಗಳು ಶ್ರೀ ಕೃಷ್ಣ ದೇವಸ್ಥಾನ ಸರ್ವ ಹಿಂದೂಗಳಿಗೂ ಸೇರಿದ್ದು ಎಂದು ಈ ಹಿಂದೆಯೇ ತೀರ್ಪು ನೀಡಿವೆ. ಅಲ್ಲದೆ ಈ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಕಡತಗಳು ಕೂಡ ಅದನ್ನೇ ಹೇಳುತ್ತಿವೆ ಹಾಗೂ ಡಿನೋಟಿಫೈ ಮಾಡಬಾರದೆಂದು ಕೂಡ ತಿಳಿಸುತ್ತದೆ. ಆದರೆ ಈ ಜಾತಿವಾದಿ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಅದನ್ನು ಡಿನೋಟಿಫೈ ಮಾಡಿದ್ದಾರೆಂದು ಡಾ.ದ್ವಾರಕಾನಾಥ್ ಆಪಾದಿಸಿದರು.
ಈ ವಿಚಾರದಲ್ಲಿ ವೌನವಹಿಸಿರುವ ಸಂಘಪರಿವಾರದ ನಿಜ ಬಣ್ಣ ಬಯಲಾಗಿದೆ. ಅದು ಹಿಂದೂ ಧರ್ಮಕ್ಕಾಗಿ ಇರುವ ಸಂಘಟನೆ ಅಲ್ಲ. ಬದಲಾಗಿ ಬ್ರಾಹ್ಮಣರ ರಕ್ಷಣೆಗೆ ಇರುವುದಾಗಿದೆ. ಬ್ರಾಹ್ಮಣರ ಹಿತಾಸಕ್ತಿ ಕಾಪಾಡುವ ಹಿಂದೂ ವಿರೋಧಿ ಸಂಘಟನೆ ಇದಾಗಿದೆ. ಹಿಂದೂ ಧರ್ಮಕ್ಕೆ ಬೆದರಿಕೆ ಇರುವುದು ಇತರ ಧರ್ಮಗಳಿಂದಲ್ಲ. ಬದಲಾಗಿ ಸಂಘಪರಿವಾರದಿಂದ ಎಂದು ಡಾ. ದ್ವಾರಕಾನಾಥ್ ಕಟುವಾಗಿ ಟೀಕಿಸಿದರು.
ಶತಮಾನಗಳ ಹಿಂದೆಯೇ ಉಡುಪಿ ಶ್ರೀಕೃಷ್ಣ ಮಧ್ವ ಪರಂಪರೆಯನ್ನು ನಿರಾಕರಿಸಿದ ಕನಕನಿಗೆ ಒಲಿದರೂ, ವೈಷ್ಣವರು ಮಾತ್ರ ಇನ್ನೂ ಕೂಡ ಶ್ರೀ ಕೃಷ್ಣ ದೇವಸ್ಥಾನದಲ್ಲಿಯೇ ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದಾರೆ ಎಂದ ಅವರು, ಶ್ರೀಕೃಷ್ಣ, ಕನಕ, ನಾರಾಯಣ ಗುರು, ಗಾಂಧೀಜಿ, ವಿವೇಕಾನಂದರು ನಂಬಿದಂತಹ ಹಿಂದೂ ಧರ್ಮ ಇಂದು ಸಂಕಷ್ಟದ ಸ್ಥಿತಿಯಲ್ಲಿದೆ. ಇವರೆಲ್ಲರ ಆಶಯಗಳು ಜಾತಿವಾದಿ ಮಠಗಳಿರುವ ಉಡುಪಿಯಂತಹ ಸ್ಥಳಗಳಲ್ಲಿ ಮಣ್ಣು ಮುಕ್ಕುತ್ತಿವೆ ಎಂದು ಅವರು ತಿಳಿಸಿದರು.