ಚಲಿಸುತ್ತಿದ್ದ ಬಸ್ ಮೇಲೆ ಉರುಳಿದ ಭಾರೀ ಮರ
ಮೆಜೆಸ್ಟಿಕ್ ನಿಂದ ನೀಲಸಂದ್ರಕ್ಕೆ ತೆರಳುತ್ತಿದ್ದ ಕೆಎ 01 ಎಫ್ಎ 1676 ನಂಬರ್ ಇದ್ದ ರೂಟ್ ನಂ.146 ಬಸ್ ಮೇಲೆ ಮರ ಉರುಳಿ ಭಾರೀ ಆವಾಂತರ ಸೃಷ್ಟಿಸಿದೆ. ಸ್ಥಳದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬಸ್ಸಿನ ಹಿಂಭಾಗದಲ್ಲಿ ಮರ ಬಿದ್ದಿದ್ದರಿಂದ ಹಿಂಭಾಗದಲ್ಲಿರುವವರು ಗಾಯಗೊಂಡಿದ್ದಾರೆ. ಕೂಡಲೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನಾಲ್ವರನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಅವರಲ್ಲಿ ಮೂವರಿಗೆ ತೀವ್ರವಾಗಿ ಗಾಯವಾಗಿದ್ದು ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಕೂಡ ರಕ್ಷಣೆಗೆ ಧಾವಿಸಿ ಮುಂಭಾಗದಲ್ಲಿ ಕುಳಿತವರನ್ನು ಹೊರಕ್ಕೆ ತರಲು ಸಹಾಯ ಮಾಡಿದ್ದಾರೆ. ಬಸ್ಸಿನಲ್ಲಿ ಒಟ್ಟು 34 ಜನ ಪ್ರಯಾಣಿಸುತ್ತಿದ್ದರು.
ಸ್ಥಳದಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಇಂದು ಕೂಡ ಮುಂದುವರಿದಿರುವುದರಿಂದ ಮತ್ತು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿರುವುದರಿಂದ ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ಮಳೆಯಾಗುತ್ತಿರುವುದರಿಂದ ಮರದ ಕೆಳಗಿನ ಮಣ್ಣು ಸಡಿಲಾಗಿ ಬೇರುಸಮೇತ ಮರ ಉರುಳಿದೆ ಎಂದು ಶಾಂತಿನಗರದ ಶಾಸಕ ಹ್ಯಾರಿಸ್ ಹೇಳಿದ್ದಾರೆ. ಇಂಥ ಅಪಾಯ ಇತರ ಪ್ರದೇಶದಲ್ಲಿಯೂ ಸಂಭವಿಸುವ ಸಾಧ್ಯತೆಯಿರುವುದರಿಂದ ಕೂಡಲೆ ಸರಕಾರ ಮರಗಳು ಬೀಳದಂತೆ ಕಾಂಕ್ರೀಟ್ ಹಾಕಿ ಮರಗಳನ್ನು ಮತ್ತು ಜನರನ್ನು ಕಾಪಾಡಬೇಕೆಂದು ಕೋರಿದ್ದಾರೆ.