ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ ಸಾಧ್ಯತೆ
ಗದಗ ಜಿಲ್ಲೆ ಕೈಬಿಟ್ಟು ರಾಯಚೂರು ಜಿಲ್ಲೆ ಉಸ್ತುವಾರಿ ನೀಡುವ ಮೊದಲು ಮುಖ್ಯಮಂತ್ರಿ ಅವರು ತಮ್ಮನ್ನು ಒಂದು ಮಾತು ಕೇಳಬಹುದಿತ್ತು. ಅವರ ಏಕಪಕ್ಷೀಯ ನಿರ್ಧಾರ ತಮಗೆ ತೀವ್ರ ನೋವು ತಂದಿದೆ ಎಂದು ಶ್ರೀರಾಮುಲು ಹೇಳಿದ್ದಾರೆ. ಮೈಸೂರು ಸೇರಿದಂತೆ ನಾನಾ ಕಡೆಗಳಲ್ಲಿ ನಡೆದ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ತಾವು ಮುಖ್ಯಮಂತ್ರಿ ಜತೆ ಪಾಲ್ಗೊಂಡಿದ್ದೆ. ಆಗ ಉಸ್ತುವಾರಿ ಸಚಿವರನ್ನು ಬದಲಿಸುವ ವಿಷಯ ತಿಳಿಸಬಹುದಿತ್ತು ಎಂದು ಅವರು ತಿಳಿಸಿದ್ದಾರೆ.
ಇನ್ನೊಂದೆಡೆ ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಸಹ ಮುಖ್ಯಮಂತ್ರಿ ಕಾರ್ಯಶೈಲಿಯನ್ನು ವಿಶ್ಲೇಷಣೆಗೊಳಪಡಿಸಿದ್ದಾರೆ. ಸಂಪುಟ ವಿಸ್ತರಣೆ ವೇಳೆ ನಾನು ನೀಡಿದ್ದ ಸಲಹೆಯನ್ನು ತಿರಸ್ಕರಿಸುವ ಮೂಲಕ ಯಡಿಯೂರಪ್ಪ ಸಂಕಷ್ಟ ತಂದುಕೊಂಡರು ಎಂದು ರೆಡ್ಡಿ ಹೇಳಿದ್ದಾರೆ. ಗೂಳಿಹಟ್ಟಿ ಶೇಖರ್ ಮತ್ತು ಶಿವನಗೌಡ ನಾಯಕರನ್ನು ಸಂಪುಟದಿಂದ ಕೈಬಿಡದಿರುವಂತೆ ಮುಖ್ಯಮಂತ್ರಿಗೆ ಸಲಹೆ ನೀಡಿದ್ದೆ. ಆದರೆ, ಅವರು ನನ್ನ ಸಲಹೆಯನ್ನು ತಿರಸ್ಕರಿಸಿದ್ದರಿಂದ ಸರಕಾರದ ಸ್ಥಿರತೆಗೆ ಧಕ್ಕೆ ಉಂಟಾಯಿತು ಎಂದು ರೆಡ್ಡಿ ತಿಳಿಸಿದ್ದಾರೆ.