ಶೀಘ್ರದಲ್ಲೇ ಉಮಾ ಬಿಜೆಪಿ ತೆಕ್ಕೆಗೆ : ಗಡ್ಕರಿ
ಉಮಾ ನನ್ನನ್ನು ಇತ್ತೀಚೆಗೆ ಭೇಟಿಯಾಗಿದ್ದರು. ಆಗ ಅವರು ತಮ್ಮ ಆರೋಗ್ಯ ಸುಧಾರಿಸಬೇಕಿದೆ. ಜತೆಗೆ ಧ್ಯಾನ ಮತ್ತು ಶಾಂತಿಗಾಗಿ ಸಮಯ ಬೇಕಾಗುತ್ತಿದೆ ಎಂದು ಹೇಳಿದರು. ಪಕ್ಷಕ್ಕೆ ಮರಳುವ ಕುರಿತು ಶೀಘ್ರವೇ ಮಾಹಿತಿ ನೀಡುವುದಾಗಿಯೂ ಸ್ಪಷ್ಟಪಡಿಸಿದರು ಎಂದು ಗಡ್ಕರಿ ತಿಳಿಸಿದ್ದಾರೆ. 2010ರ ಜೂನ್ನಲ್ಲಿ ಉಚ್ಚಾಟಿತ ಹಿರಿಯ ನಾಯಕ ಜಸ್ವಂತ್ ಸಿಂಗ್ ಪಕ್ಷದ ತೆಕ್ಕೆಗೆ ಮರಳಿದ ಬಳಿಕ ಉಮಾ ಸಹ ಪಕ್ಷಕ್ಕೆ ಮರಳುವ ಊಹಾಪೋಹಕ್ಕೆ ಜೀವ ಬಂದಿತ್ತು.
ವಿರೋಧಿಗಳ ಆತಂಕ : ಆದರೆ ಉಮಾ ಪಕ್ಷಕ್ಕೆ ಮರಳುವುದನ್ನು ಅನೇಕ ನಾಯಕರು ಒಳಗೊಳಗೇ ವಿರೋಧಿಸುತ್ತಿದ್ದಾರೆ. ಉಮಾ ಸೇರ್ಪಡೆಯಾದರೆ ಪಕ್ಷದಲ್ಲಿ ತಮ್ಮ ಸ್ಥಾನಮಾನ ಕುಗ್ಗಲಿದೆ ಎಂಬುದು ಈ ನಾಯಕರ ಆತಂಕವಾಗಿದೆ.
ಛತ್ತೀಸ್ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಎಲ್.ಕೆ. ಆಡ್ವಾಣಿ ಜತೆಗೂಡಿ ಉಮಾ ಛತ್ತೀಸ್ಗಢಕ್ಕೆ ತೆರಳಿದ್ದರು. ಬಳಿಕ ಆಡ್ವಾಣಿ ಅವರು ಸೋಮನಾಥಪುರಕ್ಕೆ ಭೇಟಿ ನೀಡಿದಾಗಲೂ ಉಮಾ ಜತೆಗಿದ್ದರು. ಪಕ್ಷಕ್ಕೆ ಮರಳಿದ ಬಳಿಕ ಉಮಾ ಉತ್ತರಪ್ರದೇಶ ಮತ್ತಿತರ ಉತ್ತರ ರಾಜ್ಯಗಳತ್ತ ಗಮನಹರಿಸಲಿದ್ದಾರೆ ಎಂದು ಪಕ್ಷದ ಹಿರಿಯರು ಅಭಯ ನೀಡಿದ್ದಾರೆ.