ರಾಜ್ಯ ಕ್ರಿಕೆಟ್ ಅಭಿವೃದ್ಧಿಯೇ ಗುರಿ : ಶ್ರೀನಾಥ್
ಸಾಕಷ್ಟು ಸಂಖ್ಯೆಯ ಉದ್ದಿಮೆಗಳು ಕಾರ್ಪೊರೇಟ್ ಕ್ಷೇತ್ರದಲ್ಲಿ ಛಾಪು ಮೂಡಿಸುವ ಜತೆಗೆ ಕ್ರಿಕೆಟ್ ಜತೆಗೆ ತೀರ ಹತ್ತಿರದ ನಂಟು ಬೆಳೆಸಿಕೊಂಡಿವೆ. ಕಾರ್ಪೊರೇಟ್ ಶೈಲಿಯಂತೆ ಕ್ರಿಕೆಟ್ ನಲ್ಲೂ ವೃತ್ತಿಪರತೆಯ ಅನಿವಾರ್ಯ ಎಂದು ಶ್ರೀನಾಥ್ ಅಭಿಪ್ರಾಯಪಟ್ಟರು. ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ನ. 21 ರಂದು ಚುನಾವಣೆ ನಡೆಯಲಿದೆ.
ಶ್ರೀನಾಥ್ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮತ್ತೊಬ್ಬ ಮಾಜಿ ಆಟಗಾರ ಅನಿಲ್ ಕುಂಬ್ಳೆ ಕ್ರಿಕೆಟ್ ಅಭಿವೃಧ್ಧಿಯ ಕುರಿತ ತಮ್ಮ ಯೋಜನೆಗಳ ಬಗ್ಗೆ ಶುಕ್ರವಾರ ಸುದ್ದಿಗಾರರಿಗೆ ವಿವರಿಸಿದರು. ತಮಗೆ ಆಡಳಿತದ ಜ್ಞಾನ ಇಲ್ಲವೆಂದು ಅಸಂಬದ್ಧ ಹೇಳಿಕೆ ಕೊಡುವವರು ಎಂದಿಗೂ ಕ್ರಿಕೆಟ್ ಆಡಿರುವುದಿಲ್ಲ, ಒಬ್ಬನ ಪ್ರೋತ್ಸಾಹ ಸಿಕ್ಕರೂ ಇಡೀ ತಂಡವೇ ಯಶಸ್ಸು ಸಾಧಿಸಬಹುದು ಎಂಬುದು ಬಹುಶಃ ಅವರಿಗೆ ತಿಳಿದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮುಂದಿನ ಮೂರು ವರ್ಷಗಳ ಅಧಿಕಾರದಲ್ಲಿ ಕರ್ನಾಟಕ ಕ್ರಿಕೆಟ್ ಅನ್ನು ರಾಜ್ಯದ ಮೂಲೆಮೂಲೆಗೂ ಬೆಳೆಸುವ ಆಸೆ ನಮ್ಮದು. ಆ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಕ್ರಿಕೆಟ್ಗೆ ಉತ್ತಮ ಸ್ಥಾನ ದೊರಕಿಸಿಕೊಡುವ ಗುರುತರ ಸವಾಲು ನಮ್ಮ ಮೇಲಿದೆ. ಈ ಕನಸು ನನಸಾಗಲು ಎಲ್ಲರ ಪ್ರೋತ್ಸಾಹ ಮತ್ತು ಸಹಕಾರ ಬೇಕು ಎಂದರು.