ಶವಚ್ಛೇದ : ಅಪ್ಪನ ಆಸೆ ಈಡೇರಿಸಿದ ಮಗ
ಕಳೆದ ವರ್ಷ ನ.13 ರಂದು ಸಾವನ್ನಪ್ಪಿದ್ದ ಡಾ ಬಿಎಸ್ ರಾಮಣ್ಣವರ ಪಾರ್ಥಿವ ಶರೀರವನ್ನು ಬೆಳಗಾವಿ ಕೆಎಲ್ ಇ ಸಂಸ್ಥೆಯ ಬಿಎಂ ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಇರಿಸಲಾಗಿತ್ತು. ಬದುಕಿನುದ್ದಕ್ಕೂ ಸಾಮಾಜಿಕ ಸೇವೆ ಮಾಡುತ್ತಲೇ ಬಂದಿದ್ದ ರಾಮಣ್ಣನವರ್ ಅವರು ತಾವು ಮೃತಪಟ್ಟ ನಂತರವ ತಮ್ಮ ದೇಹವನ್ನು ಆಯುರ್ವೇದ ಕಾಲೇಜಿಗೆ ದಾನ ನೀಡಬೇಕು ಎಂದು ವಿಲ್ ಬರೆದಿಟ್ಟಿದ್ದರು.
ನನ್ನ ದೇಹವನ್ನು ನನ್ನ ಮಗ ವೈದ್ಯ ಡಾ ಮಹಾಂತೇಶ್ ರಾಮಣ್ಣನವರ್ ಛೇದನ ಮಾಡಬೇಕು ಎಂದು ಸಹ ಉಲ್ಲೇಖಿಸಿದ್ದರು. ಅದರಂತೆ ಇಂದು ಬಿ ಎಸ್ ರಾಮಣ್ಣನವರ್ ಮೃತಪಟ್ಟು ಒಂದು ವರ್ಷ ಪೂರ್ಣಗೊಳಿಸಿದ ನಂತರ ಅವರ ಅಶಯದಂತೆ ಅವರ ಮಹಾಂತೇಶ್ ಇಂದು ತಂದೆಯ ದೇಹವನ್ನು ಛೇದಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. ವಿಶೇಷವೆಂದರೆ, ಈ ಸಂದರ್ಭದಲ್ಲಿ ರಾಮಣ್ಣನವರ ಧರ್ಮಪತ್ನಿ ಕೂಡಾ ಉಪಸ್ಥಿತರಿದ್ದರು.
ಭಯ ಇಲ್ಲ : ತಂದೆಯ ಆಶಯದಂತೆ ಇಂದು ನಾನು ಅವರ ದೇಹ ಛೇದನ ಮಾಡುತ್ತಿದ್ದೇನೆ. ಇದರಲ್ಲಿ ನನಗೆ ಏನೂ ವಿಶೇಷ ಅನಿಸುತ್ತಿಲ್ಲ, ಭಯವೂ ಇಲ್ಲ. ಒಬ್ಬ ವೈದ್ಯನಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ನನ್ನ ಧರ್ಮ. ಇದನ್ನು ನಾನು ನನ್ನ ತಂದೆಯಿಂದಲೇ ಕಲಿತಿದ್ದೇನೆ. ತಂದೆಯ ಅಂತಿಮ ಆಸೆ ಈಡೇರಿಸಿದ ಧನ್ಯತಾಭಾವ ನನ್ನಲ್ಲಿದೆ ಎಂದು ಮಹಾಂತೇಶ್ ಹೇಳಿದ್ದಾರೆ.
ಕೆಎಲ್ಇ ಸಂಸ್ಥೆ ಹೆಮ್ಮೆ : ತಂದೆಯ ದೇಹವನ್ನು ಮಗ ಛೇದನ ಮಾಡಿರುವ ಅಪರೂಪದ ಘಟನೆ ಕೆಎಲ್ಇ ಸಂಸ್ಥೆಯ ಕಾಲೇಜಿನಲ್ಲಿ ನಡೆದಿರುವಕ್ಕೆ ಕೆಎಲ್ಇ ಚೇರಮನ್ ಪ್ರಭಾಕರ್ ಕೋರೆ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಇದೊಂದು ಸುವರ್ಣಾಕ್ಷರದಿಂದ ಬರೆದಿಡುವಂತ ಪ್ರಸಂಗ. ತಂದೆಯ ದೇಹವನ್ನು ಮಗ ಛೇದನ ಮಾಡುವುದು ವಿಶ್ವದಲ್ಲೇ ಮೊದಲು. ಇಂತಹ ಸಾಧನೆ ಕೆಎಲ್ಇ ಸಂಸ್ಥೆಯಿಂದ ನಡೆದಿರುವುದು ಹೆಮ್ಮೆಯ ಸಂಗತಿ.
ವೈದ್ಯ ಇತಿಹಾಸದಲ್ಲೇ ಪ್ರಥಮ : ಮಗನಿಂದಲೇ ಇಂದು ತಂದೆಯ ದೇಹ ಛೇದನ 17ನೇ ಶತಮಾನದ ಕೊನೆಯಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಇಂಗ್ಲೆಂಡ್ನ ಫ್ಲೊಕ್ಸ್ಟೋನ್ ಕೆಂಟ್ದ ಸರ್ ವಿಲಿಯಂ ಹಾರ್ವೆ ತನ್ನ ಮೃತ ಸೋದರಿಯ ದೇಹ ಛೇದಿಸಿ ಮಾನವ ದೇಹದ ರಕ್ತ ಪರಿಚಲನೆ ಕಂಡು ಹಿಡಿದಿದ್ದ. ಆಗ ಇದು ವಿಚಿತ್ರವಾಗಿ ಕಂಡರೂ ಹಾರ್ವೆಗೆ ಅನಿವಾರ್ಯವಾಗಿತ್ತು. ಜನರ ಯಾವ ಮಾತನ್ನು ಕೇಳಿಸಿಕೂಳ್ಳದೇ ಹಾರ್ವೆ, ದೇಹದ ಅದ್ಭುತ ಸತ್ಯವೊಂದನ್ನು ಕಂಡುಹಿಡಿದಿದ್ದ. ರಕ್ತ ಪರಿಚಲನೆಯ ಶೋಧನೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿತು.