ರಾಜೀವಗಾಂಧಿ ಕೊಂದಿದ್ದು ಸೋನಿಯಾಗಾಂಧಿಯಂತೆ!
ಭೋಪಾಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸುದರ್ಶನ್ ಈ ಆರೋಪ ಮಾಡಿದ್ದಾರೆ. ಸುದರ್ಶನ್ ಅವರ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಸ್ವತಃ ಆರೆಸ್ಸೆಸ್, ಬಿಜೆಪಿ ಪಕ್ಷಗಳು ಸುದರ್ಶನ್ ಅವರನ್ನು ಹೇಳಿಕೆಯನ್ನು ತಳ್ಳಿಹಾಕಿವೆ. ಸುದರ್ಶನ್ ನೀಡಿರುವ ಹೇಳಿಕೆಗೂ ಆರೆಸ್ಸೆಸ್ ಗೂ ಸಂಬಂಧವಿಲ್ಲ ಎಂದು ಆರೆಸ್ಸೆಸ್ ವಕ್ತಾರ ರಾಮ್ ಮಾಧವ್ ಸ್ಪಷ್ಟಪಡಿಸಿದ್ದಾರೆ.
ಸೋನಿಯಾ ಗಾಂಧಿ ಪ್ರಜಾಸತ್ತಾತ್ಮಕ ಚುನಾಯಿತ ಪ್ರತಿನಿಧಿಯಾಗಿದ್ದು, ಯುಪಿಎ ಅಧ್ಯಕ್ಷೆಯಾಗಿದ್ದಾರೆ. ಅವರನ್ನು ನಾವು ತುಂಬ ಗೌರವದಿಂದ ನೋಡಬೇಕು. ರಾಜಕೀಯ ಭಿನ್ನಾಭಿಪ್ರಾಯವಿದ್ದರೆ ಅದನ್ನು ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ವಿರೋಧಿಸಬೇಕೆ ಹೊರತು ಅವಹೇಳನಕಾರಿಯಾಗಿ ಮಾತನಾಡಬಾರದು ಎಂದು ಬಿಜೆಪಿ ವಿವಾದಿಂದ ದೂರ ಉಳಿದಿದೆ.
ಸುದರ್ಶನ್ ಅವರ ಈ ಹೇಳಿಕೆಯನ್ನು ತೀವ್ರ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಆರೆಸ್ಸೆಸ್ ಮತ್ತು ಬಿಜೆಪಿ ಹೇಳುವುದಾದರೆ ಬಹಿರಂಗವಾಗಿ ಖಂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಉತ್ತಮ ಸಂಸ್ಕೃತಿ ಮತ್ತು ಶಿಸ್ತಿನ ಸಂಘಟನೆಯೆಂದು ಹೇಳಿಕೊಳ್ಳುತ್ತಿರುವ ಆರೆಸ್ಸೆಸ್ ನ ಮಾಜಿ ಮುಖ್ಯಸ್ಥರೊಬ್ಬರು ಇಷ್ಟು ಕೀಳು ಮಟ್ಟದಲ್ಲಿ ವರ್ತಿಸಬಾರದಿತ್ತು ಹಾಗೂ ಸುಳ್ಳು ಆಪಾದನೆ ಮಾಡಬಾರದಿತ್ತು ಎಂದು ಸಿಂಗ್ ಹೇಳಿದ್ದಾರೆ.
ಸುದರ್ಶನ್ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಜನತೆಗೆ ನೋವಾಗಿದೆ. ಇದರಿಂದ ದೇಶದಲ್ಲಿ ಅಹಿತಕರ ಘಟನೆ ನಡೆದರೆ ಆರೆಸ್ಸೆಸ್ ಹೊಣೆಯಾಗಬೇಕಾಗುತ್ತದೆ ಎಂದು ದಿಗ್ವಿಜಯ್ ಸಿಂಗ್ ಎಚ್ಚರಿಸಿದ್ದಾರೆ.