ಭಗವದ್ ಗೀತಾ ರಸಪ್ರಶ್ನೆ : ನ.13ರಂದು ಫೈನಲ್
ಫೈನಲ್ ನಲ್ಲಿ ತುಮಕೂರಿನ ಚೇತನಾ ವಿದ್ಯಾಮಂದಿರ, ಮೂಡಬಿದ್ರಿಯ ಜೈನ್ ಶಾಲೆ, ಪುತ್ತೂರಿನ ವಿವೇಕಾನಂದ ಪ್ರೌಢಶಾಲೆ, ಚಿಕ್ಕಬಳ್ಳಾಪುರದ ಸತ್ಯಸಾಯಿ ಸೇವಾಕೇಂದ್ರ, ಬೆಂಗಳೂರಿನ ತುಮಕೂರು ರಸ್ತೆಯ ಜಿಂದಲ್ ಪ್ರೌಢಶಾಲೆ ಮತ್ತು ರಾಜಾಜಿನಗರದ ಸರ್ದಾರ್ ಪಟೇಲ್ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧಿಸಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸ್ವರ್ಣವಲ್ಲೀ ಮಠ, ಸೋಂದಾ, ಶಿರಸಿಯ ಪೂಜ್ಯ ಶ್ರೀಶ್ರೀ ಗಂಗಾಧರೇಂದ್ರ ಸ್ವಾಮೀಜಿಗಳೇ ನೇರವಾಗಿ ಪ್ರಶ್ನೆಗಳನ್ನು ಕೇಳಲಿದ್ದಾರೆ.
ಜೂನ್ 5, 2010ರಂದು ಉಡುಪಿಯ ದಿವ್ಯಮಂಗಳ ಶ್ರೀಕೃಷ್ಣನ ಸನ್ನಿಧಿಯಲ್ಲಿ ಈಗಿನ ಪರ್ಯಾಯ ಶೀರೂರು ಶ್ರೀಕೃಷ್ಣಮಠದ ಶ್ರೀಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಆಶೀರ್ವಾದದೊಂದಿಗೆ "ಗೀತಾ ದ್ಯುತಿ 2010" ಪ್ರಾರಂಭವಾಗಿತ್ತು. ರಾಜ್ಯಾದ್ಯಂತ 15 ಜಿಲ್ಲೆಗಳ 125 ಶಾಲೆಗಳಿಂದ 8 ಸಾವಿರ ಹೈಸ್ಕೂಲು ವಿದ್ಯಾರ್ಥಿಗಳು ಭಾಗವಹಿಸಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕ-ತಾತ್ಪರ್ಯ-ವಿಶಿಷ್ಟ ಅಭ್ಯಾಸಗಳುಳ್ಳ 220 ಪುಟಗಳ ಪುಸ್ತಕವನ್ನು ಮುದ್ರಿಸಿ ನೀಡಲಾಯಿತು.
ಜುಲೈ, ಸೆಪ್ಟೆಂಬರ್ ನಲ್ಲಿ ನಡೆದ ಶಾಲಾ ಮಟ್ಟದ ಎರಡು ಸುತ್ತು ಲಿಖಿತ ಸ್ಪರ್ಧೆಯ ನಂತರ ಅಕ್ಟೋಬರ್ನಲ್ಲಿ ನಡೆದ ಜಿಲ್ಲಾಮಟ್ಟದ ಕ್ವಾರ್ಟರ್ ಫೈನಲ್ಸ್ನಲ್ಲಿ 54 ಶಾಲೆಗಳಿಂದ 162 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯಮಟ್ಟದಲ್ಲಿ ಆಯ್ಕೆಯಾದ 18 ಶಾಲೆಗಳ 54 ವಿದ್ಯಾರ್ಥಿಗಳು ಸೆಮಿಫೈನಲ್ ತಲುಪಿದ್ದರು.
ಇದೇ ಸಂದರ್ಭದಲ್ಲಿ ಸುಪ್ರಸಿದ್ಧ ವಿದ್ವಾಂಸರು, ಅನುಭಾವಿಗಳ ಲೇಖನಗಳನ್ನೊಳಗೊಂಡ ಸ್ಮರಣಸಂಚಿಕೆಯನ್ನೂ ಬಿಡುಗಡೆ ಮಾಡಲಾಗುತ್ತದೆ. ಈ ಫೈನಲ್ಸ್ ಸ್ಪರ್ಧೆಯಲ್ಲಿ ವಿಜೇತ ಮೊದಲ ತಂಡಕ್ಕೆ ರು. 9,000, 2ನೇ, 3ನೇ ತಂಡಕ್ಕೆ ಕ್ರಮವಾಗಿ ರು. 6,000, ರು. 3,000 ನಗದು ಬಹುಮಾನ ನೀಡಲಾಗುವುದು.
ಯುವ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರಚಾರಕ್ಕೆಂದೇ ಉದಯಿಸಿರುವ Cultural India Foundation ಸಂಸ್ಥೆ ಈ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಹೆಚ್ಚಿನ ವಿವರಗಳಿಗೆ ದಿಲೀಪ್ ಬೆಳ್ಳಾವೆಯವರನ್ನು 98860 20825 ದೂರವಾಣಿ ಮೂಲಕ ಸಂಪರ್ಕಿಸಿ.
ಉಚಿತ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7