ಬಿಜೆಪಿ ಅಧಿಕಾರ ಅವಧಿ ಶೋಕಾಚರಣೆಗೆ ಮೀಸಲು
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಮೀಸಲಾತಿ ಪಟ್ಟಿಯಲ್ಲಿ ಅಕ್ರಮ ಎಸಗಿದರೆ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಗುಡುಗಿದ್ದಾರೆ.
ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷದ ಚೇಲಾಗಳನ್ನು ಗೆಲ್ಲಿಸಿಕೊಳ್ಳಲು ಮೀಸಲಾತಿ ಪಟ್ಟಿಯಲ್ಲಿ ಅಕ್ರಮ ಎಸಗುವ ಸಾಧ್ಯತೆಗಳಿವೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳ ತಾಯಂದಿರಿಗೆ ಸೀರೆ ವಿತರಿಸುವ ಕಾರ್ಯಕ್ರಮದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಯೋಜನೆಯನ್ನು ಪ್ರಾರಂಭಿಸಿದಾಗಲೇ ಸೀರೆ ವಿತರಿಸುತ್ತೇವೆಂದು ಪ್ರಕಟಿಸಬಹುದಿತ್ತು. ಇದೆಲ್ಲಾ ಜಿಲ್ಲಾ ಪಂಚಾಯಿತಿ ಚುನಾವಣೆಗಾಗಿ ಮಾಡಿರುವ ಗಿಮಿಕ್ ಎಂದು ವ್ಯಂಗ್ಯವಾಡಿದರು.
ಮಾಟ, ಮಂತ್ರ, ಕುತಂತ್ರ: ಭಿನ್ನಮತವನ್ನು ತಗ್ಗಿಸಲು ಸಚಿವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂಬ ಕುಂಟು ನೆಪವೊಡ್ಡಿ, ರಾಜ್ಯದ ಜನತೆಯನ್ನು ಯಡಿಯೂರಪ್ಪ ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ನ ನಾಯಕರುಗಳು ಮಾಟ, ಮಂತ್ರ ಮಾಡಿಸಿದ್ದಾರೆಂಬ ಮುಖ್ಯಮಂತ್ರಿಯ ಆರೋಪಕ್ಕೆ ಉತ್ತರಿಸಿದ ಅವರು, ನಾನು ದೇವರನ್ನು ನಂಬುತ್ತೇನೆ. ಅದನ್ನು ಹೊರತುಪಡಿಸಿ ನನಗೇನೂ ತಿಳಿದಿಲ್ಲ. ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಅವರು ದೇವರನ್ನೇ ನಂಬುವುದಿಲ್ಲ. ಮಠ-ಮಾನ್ಯಗಳಿಗೂ ಹೋಗುವುದಿಲ್ಲ ಎಂದ ಮೇಲೆ ಮಾಟ-ಮಂತ್ರ ಮಾಡಿಸಲು ಪುರುಸೊತ್ತು ಎಲ್ಲಿದೆ ಪ್ರಶ್ನಿಸಿದರು.
ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ: ಸಚಿವ ಸಂಪುಟದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡಿ ಎಂದು ಮುಖ್ಯಮಂತ್ರಿಗಳಲ್ಲಿ ಬೇಡಿಕೆಯಿಟ್ಟ ಅವರು, ಮೂಡಿಗೆರೆ ಕ್ಷೇತ್ರದ ಕುಮಾರಸ್ವಾಮಿ ಅವರನ್ನು ಸಚಿವರನ್ನಾಗಿ ಮಾಡಿದರೆ ನನ್ನ ದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.
ಮೀಸಲಾತಿ ಪಟ್ಟಿ ಪ್ರಕಟ: ಈ ನಡುವೆ ರಾಜ್ಯದ 31 ಜಿಲ್ಲೆಗಳ 1013 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ಷೇತ್ರವಾರು ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ. ಮಹಿಳೆಯರಿಗೆ ಶೇ.53, ಪರಿಶಿಷ್ಟ ವರ್ಗಕ್ಕೆ ಶೇ.18 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.5 ರಷ್ಟು ಎಂದು ನಿಗದಿ ಮಾಡಲಾಗದೆ.