ಆನಂದ್ ಆಸ್ನೋಟಿಕರ್ ಆಸ್ಫೋಟಿಸಿದ ಹೊಸ ಬಾಂಬ್
ಯಡಿಯೂರಪ್ಪ ಸರಕಾರದಲ್ಲಿ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಆನಂದ್ ಆಸ್ನೋಟಿಕರ್, ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತಕ್ಕೆ ಸೊಪ್ಪು ಹಾಕಿದ್ದೇ ರಾಷ್ಟ್ರೀಯ ನಾಯಕ ಅನಂತ್ ಕುಮಾರ್, 'ಖಜಾಂಚಿ'ಗಳಾಗಿರುವ ರೆಡ್ಡಿ ಸಹೋದರರು ಮತ್ತು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ಅಂತ ಹೇಳಿ ಭಿನ್ನಮತ ಮತ್ತಷ್ಟು ಉಲ್ಬಣವಾಗುವಂತೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕರುಗಳ ಜನ್ಮ ಜಾಲಾಡಿದ ಆಸ್ನೋಟಿಕರ್, ಎಲ್ಲ ನಾಯಕರು ಆಡಿದ ರಾಜಕೀಯ ನಾಟಕಕ್ಕೆ ಭಿನ್ನಮತೀಯ ಶಾಸಕರು ಬಲಿಯಾಗಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆಕೇರಿಯ ಬಂದರಿನಿಂದ ಅಕ್ರಮವಾಗಿ ಅದಿರನ್ನು ವಿದೇಶಗಳಿಗೆ ಸಾಗಿಸಿದ ಆರೋಪ ಹೊತ್ತಿರುವ ಸಚಿವ ಆನಂದ್, ಅದಿರು ರಫ್ತಿಗೆ ನಿಷೇಧ ಹೇರಿದ ನಂತರ ಭಿನ್ನಮತಕ್ಕೆ ಕುಮ್ಮಕ್ಕು ನೀಡಿದ್ದೇ ರೆಡ್ಡಿ ಸಹೋದರರು ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಅನಂತ್ ಕುಮಾರ್ ಮತ್ತು ಜಗದೀಶ್ ಶೆಟ್ಟರ್ ಅವರ ಬೆಂಬಲವೂ ಇತ್ತು ಎಂದು ಬೂದಿ ಮುಚ್ಚಿದ ಕೆಂಡವನ್ನು ಮತ್ತೆ ಕೆದಕಿದ್ದಾರೆ. ಬೆಲೆಕೇರಿ ಹಗರಣದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕೈವಾಡವೂ ಇದೆ ಎಂದು ಆರೋಪಿಸಿದರು.
ಯಡಿಯೂರಪ್ಪನವರನ್ನು ಮತ್ತೆ ಗುರಿಯಾಗಿಸಿಕೊಂಡ ಆನಂದ್, ಯಡಿಯೂರಪ್ಪನವರ ಹಿಟ್ಲರ್ ಬುದ್ಧಯಿಂದಲೇ ಶಾಸಕರು ದಂಗೆಯೇಳುವಂತಾಯಿತು. ತಾಸಿಗೊಂದು ಮಾತನಾಡುವ ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಶಾಸಕರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ನುಡಿದರು.
ಬಿಜೆಪಿಯಿಂದ ಮಾತ್ರವಲ್ಲ ವಿರೋಧ ಪಕ್ಷಗಳ ನಾಯಕುಗಳಿಂದ ಕೂಡ ಭಿನ್ನಮತೀಯರು ಮೂಲೆಗುಂಪಾಗಬೇಕಾಯಿತು ಎಂದು ಕೆಂಡ ಕಾರಿದರು. ಕಾಂಗ್ರೆಸ್ ಅಹ್ಮದ್ ಪಟೇಲ್ ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಮಗೆ ಆಸೆ ತೋರಿಸಿ ಬಲಿಪಶು ಮಾಡಿದ್ದಾರೆ ಎಂದು ದೂರಿದರು. ಅಲ್ಲದೆ, ಬಿಜೆಪಿ ನಾಯಕತ್ವದೊಂದಿಗೆ ಮುನಿಸಿಕೊಂಡಿದ್ದ ಭಿನ್ನಮತೀಯರ ವಿಷಯದಲ್ಲಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹಸ್ತಕ್ಷೇಪ ಮಾಡಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು ಎಂದು ನೋವನ್ನು ತೋಡಿಕೊಂಡರು.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7