ಮಲೇರಿಯಾ : ತಡವಾಗಿಯಾದರೂ ಎಚ್ಚೆತ್ತ ಸರಕಾರ
ಮಲೇರಿಯಾ ಹಾಗೂ ಇತರೆ ಖಾಯಿಲೆಗಳನ್ನು ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ ಹಾಗೂ ಜಿಲ್ಲಾ ಆಡಳಿತ ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಇಲಾಖೆಯ ಕಾರ್ಯದರ್ಶಿ ಇ ರಮಣರೆಡ್ಡಿ ತಿಳಿಸಿದ್ದಾರೆ.
ನಿರಂತರ ಜ್ವರ ಸಮೀಕ್ಷೆ ಮಾಡಲು ಇಬ್ಬರು ಆರೋಗ್ಯ ಕಾರ್ಯಕರ್ತರನ್ನೊಳಗೊಂಡ 12 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ರಕ್ತಲೇಪನಗಳನ್ನು ಸಂಗ್ರಹಿಸಿ ಪೂರ್ವಭಾವಿ ಚಿಕಿತ್ಸೆ ನೀಡುವುದು, ರಕ್ತಲೇಪನಗಳನ್ನು ಪ್ರಯೋಗಾಲಯಕ್ಕೆ ತಲುಪಿಸಿ ಪಲಿತಾಂಶಗಳನ್ನು ಸಂಗ್ರಹಿಸುವುದು ಮತ್ತು ಧೃಡಪಟ್ಟ ಮಲೇರಿಯಾ ಪ್ರಕರಣಗಳಿಗೆ ತಕ್ಷಣ ತೀವ್ರ ಚಿಕಿತ್ಸೆಯನ್ನು ಪ್ರಾರಂಭಿಸುವುದು ಇತ್ಯಾದಿ ಜವಾಬ್ದಾರಿಗಳನ್ನು ನೀಡಲಾಗಿದೆ.
ರಕ್ತಲೇಪನಗಳನ್ನು ಪರೀಕ್ಷಿಸಲು ಪ್ರಯೋಗಶಾಲಾ ತಂತ್ರಜ್ಞರನ್ನು ನಿಯೋಜಿಸಲಾಗಿದೆ. ಇಬ್ಬರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲೆಯಲ್ಲಿ ಮತ್ತಿಬ್ಬರನ್ನು ಭುವನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಿರುವ ಕ್ಷೇತ್ರ ಪ್ರಯೋಗಾಲಯಕ್ಕೆ ನೇಮಿಸಲಾಗಿದೆ.
ಇದರ ಜೊತೆಗೆ, ರಾಯಚೂರು ಜಿಲ್ಲೆಯಿಂದ 4, ಚಿತ್ರದುರ್ಗ ಜಿಲ್ಲೆಯಿಂದ 3 ಪ್ರಯೋಗಶಾಲಾ ತಂತ್ರಜ್ಞರನ್ನು, ಬಾಗಲಕೋಟೆ ಜಿಲ್ಲೆಯಿಂದ ಇಬ್ಬರು ಹಿರಿಯ ಆರೋಗ್ಯ ಸಹಾಯಕರು, ಇಬ್ಬರು ಕೀಟಶಾಸ್ತ್ರಜ್ಞರು ಮತ್ತು ನಾಲ್ಕು ಮಲೇರಿಯಾ ನಿರೀಕ್ಷಕರನ್ನು ಗಾದಿಗನೂರು ಪ್ರಾಥಮಿಕ ಕೇಂದ್ರಕ್ಕೆ ನಿಯೋಜಿಸಿ, ರಕ್ತಲೇಪನಗಳ ಪರೀಕ್ಷೆ ಮತ್ತು ಕ್ಷೇತ್ರಮಟ್ಟದಲ್ಲಿ ನಿಯಂತ್ರಣ ಕಾರ್ಯಕ್ರಮಗಳ ನಿರ್ವಹಣೆ ಮಾಡಲು ಸೂಚಿಸಲಾಗಿದೆ.
ಬಳ್ಳಾರಿ ನಗರ ಮತ್ತು ಹೊಸಪೇಟೆ ಆರೋಗ್ಯ ಕೇಂದ್ರಗಳಿಂದ 20 ವೈದ್ಯರನ್ನು ಮಲೇರಿಯಾ ಜ್ವರ ಪೀಡಿತ ಗ್ರಾಮಗಳಿಗೆ ನಿಯೋಜಿಸಿದ್ದು ತಕ್ಷಣ ತುರ್ತು ವೈದ್ಯಕೀಯ ಸೇವೆಗಳನ್ನು ಸಮುದಾಯಕ್ಕೆ ನೀಡಲಾಗುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ವಿಜಯನಗರ ವೈದ್ಯಕೀಯ ವಿಜ್ಞಾನ, ಸಂಸ್ಥೆ ಬಳ್ಳಾರಿಯಿಂದ ಕಮ್ಯುನಿಟಿ ಮೆಡಿಸಿನ್ಸ್ ವಿಭಾಗದ ತಜ್ಞರು, ಮಕ್ಕಳ ರೋಗ ತಜ್ಞರು ಮತ್ತು 12 ಗೃಹ ವೈದ್ಯರುಗಳನ್ನು ಸಹ ಗಾದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿದೆ.
ಮೇಲಿನ ನಿಯೋಜನೆಗಳೊಂದಿಗೆ ಕೊಪ್ಪಳ, ದಾವಣಗೆರೆ, ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ 16 ವೈದ್ಯರನ್ನು 8 ಸಮಸ್ಯೆಯಿರುವ ಗ್ರಾಮಗಳಲ್ಲಿ ತಕ್ಷಣ ಜ್ವರ ಸಮೀಕ್ಷೆ ಮತ್ತು ಚಿಕಿತ್ಸೆ ನೀಡಲು ನಿಯೋಜಿಸಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7