ತಾಜ್ ದಾಳಿ; ಪಾಕ್ಗೆ ಒಬಾಮಾ ಬುದ್ಧಿ ಕಲಿಸ್ತಾರಾ?
ಭಾರತ ಭೇಟಿಯ ವೇಳೆ ಒಬಾಮಾ ಅಂದು ಭಯೋತ್ಪಾದನೆ ಮತ್ತು 26/11 ದಾಳಿ ಕುರಿತು ಮಾತನಾಡಲಿದ್ದಾರೆ ಎಂದು ಖಚಿತಪಡಿಸಿವೆ ಅಮೆರಿಕಾದ ಅಧಿಕೃತ ಮೂಲಗಳು. "ತಾಜ್ ಹೋಟೆಲ್ಗೆ ಅವರು ಭೇಟಿ ನೀಡಿದ ಬಳಿಕ ಮೊದಲು ಮಾತನಾಡುವುದೇ ಭಯೋತ್ಪಾದನೆ ಬಗ್ಗೆ. ಹೆಡ್ಲಿ ಕೇಸಿನ ಪ್ರಸ್ತಾವನೆಯೂ ಬರಲಿದ್ದು, ಕಾಲಕಾಲಕ್ಕೆ ಭಯೋತ್ಪಾನೆ ಬೆದರಿಕೆಗಳ ಬಗೆಗಿನ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದ ಮೂಲದ ಲಷ್ಕರ್ ಎ ತೊಯ್ಬಾ(ಎಇಟಿ) ಹಾಗೂ ಜೈಶ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತ್ತಡ ಹೇರಲಾಗುತ್ತದೆ. ಸಾಧ್ಯವಾದರೆ ಪಾಕಿಸ್ತಾನದೊಂದಿಗಿನ ಅಮೆರಿಕದ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ನಿರ್ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
ಶ್ವೇತಭವನ ಭಾರತಕ್ಕೆ ಸ್ಥಳಾಂತರ: ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಬಂದು ಇಳಿದ ಕೂಡಲೆ ಶ್ವೇತಭವನದ ಎಲ್ಲಾ ವ್ಯವಹಾರಗಳು ಭಾರತಕ್ಕೆ ಸ್ಥಳಾಂತರಗೊಳ್ಳಲಿವೆ. ಭಾರತಕ್ಕೆ ಒಬಾಮಾ ಶನಿವಾರ (ನ.6)ರಂದು ಭೇಟಿ ನೀಡುತ್ತಿದ್ದು ಮೂರು ದಿನಗಳ ಕಾಲ ಮುಂಬೈ, ದೆಹಲಿ ಹಾಗೂ ದೇಶದ ಇತರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಒಬಾಮಾ ಅವರೊಂದಿಗೆ ಶ್ವೇತಭವನದ ಬಹುತೇಕ ಸಿಬ್ಬಂದಿ ಭಾರತಕ್ಕೆ ಆಗಮಿಸಲಿದ್ದಾರೆ. ಅವರು ಪ್ರವಾಸ ಮಾಡಲಿರುವ ಸ್ಥಳಗಳಲ್ಲಿ ಸಂಪರ್ಕ ವ್ಯವಸ್ಥೆ, ಅಣುಚಾಲಿತ ಸಾಧನಗಳು ಹಾಗೂ ಅತ್ಯಾಧುನಿಕ ಕಾರುಗಳು ಮತ್ತಿತರ ಸೌಲಭ್ಯಗಳನ್ನು ಪೂರೈಕೆ ಮಾಡಲಾಗಿದೆ.
ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರು ಶನಿವಾರ ಮಧ್ಯಾಹ್ನ 12 ಗಂಟೆಗೆ ಬಂದಿಳಿಯಲಿದ್ದಾರೆ. ಅವರ ಆಗಮನದ ಅರ್ಧ ಗಂಟೆ ಮೊದಲೆ ಮುಂಬೈ ವಿಮಾನ ನಿಲ್ದಾಣವನ್ನು ಇತರ ವಿಮಾನಗಳಿಗೆ ಮುಚ್ಚಲಾಗುತ್ತದೆ.