ಶುಭಾ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ತಾನು ಅಮಾಯಕಿ, ಗಿರೀಶ್ ಹತ್ಯೆಗೆ ಸಂಚು ರೂಪಿಸಿರಲಿಲ್ಲ ಎಂದು ಹೇಳಿದ್ದ ಶುಭಾಗೆ ಉಚ್ಚ ನ್ಯಾಯಾಲಯದಲ್ಲಿಯೂ ಸೋಲುಂಟಾಗಿದೆ. ನ್ಯಾಯಮೂರ್ತಿ ಎನ್ ಕುಮಾರ್ ಮತ್ತು ನ್ಯಾ. ಪಾಚ್ಚಾಪುರೆ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ ಈ ತೀರ್ಪನ್ನು ನೀಡಿದೆ. ಈ ಬಗೆಯ ಅಪರಾಧ ಎಸಗುವವರಿಗೆ ಈ ತೀರ್ಪು ತಕ್ಕ ಪಾಠವಾಗಬೇಕು ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಗಿರೀಶ್ ನನ್ನು ಮದುವೆಯಾಗಬೇಕಿದ್ದ ಶುಭಾ, ಆಕೆಯ ಪ್ರಿಯತಮ ಅರುಣ್ ವರ್ಮಾ, ದಿನೇಶ್ ಮತ್ತು ವೆಂಕಟೇಶ್ ಗೆ ಕೆಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಕರ್ನಾಟಕ ಹೈಕೋರ್ಟಿನಲ್ಲಿ ಶುಭಾ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸಿವಿ ನಾಗೇಶ್ ಮೇಲ್ಮನವಿ ಸಲ್ಲಿಸಿ ಆಕೆಯ ಬಿಡುಗಡೆಗಾಗಿ ಹೋರಾಟ ನಡೆಸಿದ್ದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಸೆಕ್ಷನ್ 120ಬಿ (ಸಂಚು) ಅಡಿಯಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದನ್ನು ಮತ್ತು ಸಂಚು ರೂಪಿಸಿದ್ದಕ್ಕೆ ಪ್ರತಿಯಾಗಿ ಕೆಳ ನ್ಯಾಯಲಯ ಶಿಕ್ಷೆ ನೀಡಿದ್ದನ್ನು ಕರ್ನಾಟಕ ಹೈಕೋರ್ಟ್ ಕಾಯಂ ಮಾಡಿದೆ. ವೆಂಕಟೇಶ್ ಎಂಬಾತನಿಗೆ ಜೀವಾವಧಿ ಬದಲಿಗೆ ಮರಣ ದಂಡನೆ ನೀಡಬೇಕೆಂದು ಆಗ್ರಹಿಸಿ ಸರಕಾರಿ ವಕೀಲರು ಕೋರ್ಟಿ ಮೇಲ್ಮನವಿ ಸಲ್ಲಿಸಿದ್ದರು.
2003ರ ನವೆಂಬರ್ 30ರಂದು ಗಿರೀಶ್ ಮತ್ತು ಶುಭಾ ನಡುವೆ ನಿಶ್ಚಿತಾರ್ಥ ನಡೆದಿತ್ತು. ಆದರೆ, ಅರುಣ್ ವರ್ಮಾ ಎಂಬಾತನನ್ನು ಪ್ರೀತಿಸುತ್ತಿದ್ದ ಶುಭಾ ತನ್ನ ಪ್ರೀತಿ ಉಳಿಸಿಕೊಳ್ಳಬೇಕೆಂದು ಸಂಚು ಹೂಡಿ ಇನ್ನಿಬ್ಬರ ಸಹಾಯದಿಂದ ರಿಂಗ್ ರಸ್ತೆಯಲ್ಲಿ ಡಿಸೆಂಬರ್ 3ರಂದು ಹತ್ಯೆ ಮಾಡಿಸಿದ್ದಳು. ಹತ್ಯೆಯ ನಂತರ ಯಾರೋ ಕೊಲೆ ಮಾಡಿದ್ದಾರೆ ಎಂಬಂತೆ ವರ್ತಿಸಿದ್ದಳು. ಆದರೆ, ಆಕೆ ಪ್ರಿಯತಮನಿಗೆ ಮಾಡಿದ್ದ ಫೋನ್ ಮತ್ತು ಎಸ್ಎಮ್ಎಸ್ ಗಳ ಸಹಾಯದಿಂದ ಆಕೆಯನ್ನು ಪೊಲೀಸರು ಬಲೆಗೆ ಬೀಳಿಸಿದ್ದರು.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7