ಕೆಎಸ್ ಸಿಎ ಚುನಾವಣೆ : ಕುಂಬ್ಳೆ, ಶ್ರೀನಾಥ್ ಕಣಕ್ಕೆ
ಭಾರತ ಟೆಸ್ಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ, ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಕಾರ್ಯದರ್ಶಿ ಹುದ್ದೆಗೆ ಕಣಕ್ಕಿಳಿಯಲಿದ್ದಾರೆ. ಯುವಕರಿಗೆ ಆದ್ಯತೆ ನೀಡುವ ಉದ್ದೇಶದಿಂದ ನವೆಂಬರ್ 21ರಂದು ನಡೆಯುವ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ ಎಂದು ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಇಂದು ಬ್ರಿಜೇಶ್ ಪಟೇಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಜಿಆರ್ ವಿಶ್ವನಾಥ್, ಸಯ್ಯದ್ ಕಿರ್ಮಾನಿ, ರೋಜರ್ ಬಿನ್ನಿ, ಸುಧಾಕರ್ ರಾವ್, ಜೆ ಅಭಿರಾಮ್ ಅವರನ್ನೊಳಗೊಂಡಿದ್ದ ಬ್ರಿಜೇಶ್ ಬಣ 1998ರಿಂದ ಕೆಎಸ್ ಸಿಎನಲ್ಲಿ ಅಧಿಕಾರ ಹೊಂದಿತ್ತು.
ಕಳೆದ ಬಾರಿಯ ಚುನಾವಣೆಯಲ್ಲಿ ಶ್ರೀಕಂಠದತ್ತ ಒಡೆಯರ್ ಅವರ ಬಣದಿಂದ ತೀವ್ರ ಸ್ಪರ್ಧೆ ಎದುರಿಸಿದ್ದ ಬ್ರಿಜೇಶ್ ಪಟೇಲ್ ಬಣ 13-11 ಮತಗಳಿಂದ ಅಲ್ಪ ಹಿನ್ನಡೆ ಅನುಭವಿಸಿತ್ತು. ಮುಂಬರುವ ಚುನಾವಣೆಯಲ್ಲಿ ಮುಖಭಂಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬ್ರಿಜೇಶ್ ಚುನಾವಣೆ ಅಖಾಡದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.