ಕನ್ನಡ ನಾಡು ನುಡಿ, ಜಲ, ಭಾಷೆ ಸಂರಕ್ಷಣೆಗೆ ಬದ್ಧ
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 54ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ನಾಡು ನುಡಿ, ಜಲ, ಭಾಷೆ ಸಂರಕ್ಷಣೆಗೆ ಸರಕಾರ ಬದ್ಧವಾಗಿದೆ. ನಮ್ಮ ಭಾಷೆಗೆ ಕಿಂಚಿತ್ತು ಧಕ್ಕೆಯಾದರೂ ಸಹಿಸುವುದಿಲ್ಲ. ಕನ್ನಡ ಸಂರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.
ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಹೆಸರು ಬದಲಾವಣೆ ಮಾಡುವಂತೆ ಒತ್ತಡಗಳು ಬರುತ್ತಿದ್ದು ಶೀಘ್ರದಲ್ಲಿ ಆ ಭಾಗದ ಸಾಹಿತಿ, ಬರಹಗಾರರ ಮತ್ತು ಚಿಂತಕರ ಕರೆದು ಹೆಸರು ಬದಲಾವಣೆಗೆ ತೀರ್ಮಾನ ಕೈಗೊಳ್ಳಲಾಗುವುದು. ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಲು ಸಚಿವ ಸಂಪುಟ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜನವರಿ ಅಥವಾ ಫೆಬ್ರವರಿಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಆಚರಣೆಗೆ ಬೇಕಿರುವ ಎಲ್ಲ ಸಹಾಯ ಸಹಕಾರ ಸರಕಾರ ನೀಡಲಿದ್ದು, ಸಮ್ಮೇಳನ ಯಶಸ್ವಿಗೆ ಪೂರ್ವ ಸಿದ್ಧತೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.