ಸದ್ಯಕ್ಕೆ ಶಿಕಾರಿಪುರ ಜಿಲ್ಲಾ ಕೇಂದ್ರವಾಗಲ್ಲ: ರಾಘವೇಂದ್ರ
ಹರಿದು ಹಂಚಿ ಹೋದ ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ವಿಭಜಿಸಿ ಶಿರಸಿ ತಾಲೂಕಿನಲ್ಲಿರುವ ಬನವಾಸಿ ಒಳಗೊಂಡಂತೆ ಆನವಟ್ಟಿ ತಾಲೂಕು, ಶಿಕಾರಿಪುರ ತಾಲೂಕಿನಲ್ಲಿರುವ ಶಿರಾಳಕೊಪ್ಪ ಪ್ರತ್ಯೇಕಿಸಿ ಹೊಸ ತಾಲೂಕು ಹಾಗೂ ಹೊನ್ನಾಳ್ಳಿ ತಾಲೂಕಿನಲ್ಲಿರುವ ನ್ಯಾಮತಿಯನ್ನು ಪ್ರತ್ಯೇಕಿಸಿ ಹೊಸ ತಾಲೂಕು ರಚನೆ ಮಾಡುವ ಪ್ರಯತ್ನಗಳು ನಡೆದಿತ್ತು.
ಈ ಮೂರು ಹೊಸ ತಾಲೂಕುಗಳೊಂದಿಗೆ ಶಿಕಾರಿಪುರ, ಸೊರಬ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಹಾವೇರಿ ಜಿಲ್ಲೆಯ ಹಿರೇಕೆರೂರು, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಒಳಗೊಂಡಂತೆ ಒಟ್ಟು ಎಂಟು ತಾಲೂಕುಗಳನ್ನು ಒಳಗೊಂಡ ಶಿಕಾರಿಪುರ ಜಿಲ್ಲೆ ರಚನೆಗೆ ನಕಾಶೆ ಸಿದ್ಧಪಡಿಸಲಾಗಿತ್ತು.
ಶಿಕಾರಿಪುರ ಜಿಲ್ಲಾ ಕೇಂದ್ರ ರಚನೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಕಾಸಸೌಧದಲ್ಲಿ ಪೂರ್ವಭಾವಿ ತಯಾರಿಗಳು ಭರದಿಂದ ಸಾಗಿದ್ದು, ಯಡಿಯೂರಪ್ಪ ಅಂದು ಕೊಂಡಂತೆ ಎಲ್ಲ ಕಾರ್ಯಗಳು ನಡೆದರೆ ನವೆಂಬರ್ 1ರಂದು ಶಿಕಾರಿಪುರ ಜಿಲ್ಲೆಯ ಘೋಷಣೆಯಾಗಲಿದೆ ಎಂಬ ಸುದ್ದಿ ಸರ್ಕಾರಿ ಕಚೇರಿಗಳನ್ನು ದಾಟಿ ಮಾಧ್ಯಮಗಳಿಗೆ ಹಬ್ಬಿ ಜನರನ್ನು ತಲುಪಿತ್ತು.
ಪ್ರಸ್ತುತ ಶಿಕಾರಿಪುರ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಜಿಲ್ಲಾ ಕೇಂದ್ರ ರಚನೆಗೆ ಅಗತ್ಯವಾದ ಹೊಸ ಹೊಸ ಕಟ್ಟಡಗಳ ನಿರ್ಮಾಣವಾಗುತ್ತಿವೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ಹೊಸ ಸರಕಾರಿ ಕಟ್ಟಡಗಳ ನಿರ್ಮಾಣ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿವೆ.
ಒಟ್ಟಿನಲ್ಲಿ ಮಲೆನಾಡ ಹೆಬ್ಬಾಗಿಲು, ಸಾಹಿತ್ಯ ಮತ್ತು ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡ ಶಿವಮೊಗ್ಗ ಎರಡನೇ ಬಾರಿ ವಿಭಜನೆಯ ಹಾದಿಯಲ್ಲಿದೆ. ಈ ಹಿಂದೆ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹೊನ್ನಾಳ್ಳಿ ಮತ್ತು ಚೆನ್ನಗಿರಿ ತಾಲೂಕನ್ನು ವಿಭಜಿಸಿ ದಾವಣಗೆರೆ ಜಿಲ್ಲೆಯನ್ನು ರಚಿಸಿದ್ದರು.