ಭಿನ್ನರು ಮತ್ತೆ ಬಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇವೆ
ಈಗಾಗಲೇ ಪಕ್ಷದ ಮಾನ ಹರಾಜಾಗಿದೆ. ಜನ ಬೀದಿಯಲ್ಲಿ ನಿಂತು ಬಿಜೆಪಿ ಬಗ್ಗೆ ಕೆಟ್ಟದಾಗಿ ಮಾತನಾಡಿ ಕೊಳ್ಳುತ್ತಿದ್ದಾರೆ. ಬಂಡಾಯ ಎದ್ದಿರುವ 11 ಮಂದಿಯಿಂದಲೇ ಇಷ್ಟೆಲ್ಲಾ ರಾದ್ದಾಂತವಾಗಿರುವುದು. ಅವರನ್ನು ಮತ್ತೆ ಪಕ್ಷಕ್ಕೆ ಕರೆಸಿಕೊಂಡರೆ ಪಕ್ಷದ ವರ್ಚಸ್ಸು ಮತ್ತಷ್ಟು ಕುಗ್ಗಲಿದೆ. ಒಂದು ವೇಳೆ ತೀವ್ರ ಅನಿವಾರ್ಯವಾದರೆ ಬಹಿರಂಗವಾಗಿ ಕಾರ್ಯಕರ್ತರ ಸಮ್ಮುಖದಲ್ಲಿ ಮತ್ತು ಆರು ಕೋಟಿ ಜನರ ಕ್ಷಮೆಯಾಚಿಸಿ ಬರಲಿ. ನೇರವಾಗಿ ಕಚೇರಿಗೆ ಬಂದರೆ ಬಾಗಿಲಿಗೆ ಅಡ್ಡವಾಗಿ ನಾನೇ ಮಲಗುತ್ತೇನೆ ಎಂದು ಲಕ್ಷ್ಮೀನಾರಾಯಣ ಗುಡುಗಿದ್ದಾರೆ.
ಯಡಿಯೂರಪ್ಪ ನಾಯಕತ್ವದ ವಿರುದ್ದ ಬಂಡಾಯವೆದ್ದ 11 ಮಂದಿ ಶಾಸಕರಲ್ಲಿ ಮೂವರನ್ನು ಮನವೊಲಿಸುವಲ್ಲಿ ಜನಾರ್ಧನ ರೆಡ್ಡಿ ಯಶಸ್ವಿಯಾಗಿದ್ದರು. ಈಶ್ವರಪ್ಪ ಬಳಿ ಕ್ಷಮೆಯಾಚಿಸಿ ಬಿಜೆಪಿ ಕಚೇರಿಯಲ್ಲಿ ಈ ಮೂವರು ಪತ್ರಿಕಾಘೋಷ್ಠಿ ನಡೆಸಲಿದ್ದಾರೆನ್ನುವ ಮಾಹಿತಿ ತಿಳಿದ ಕೆಲ ಬಿಜೆಪಿ ಶಾಸಕರು ಸಿಎಂ, ಈಶ್ವರಪ್ಪ ಮತ್ತು ಆರ್ ಎಸ್ ಎಸ್ ಮುಖಂಡರ ಮೇಲೆ ಒತ್ತಡ ತಂದು ರೆಡ್ಡಿಯ ಪ್ರಯತ್ನಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದರು. ಭಿನ್ನರ ಮರು ಸೇರ್ಪಡೆ ಬಗ್ಗೆ ಸಿಎಂ ಕೂಡಾ ರೆಡ್ಡಿ ಬಳಿ ಮಾತುಕತೆಗೆ ನಿರಾಕರಿಸಿದ್ದಾರೆನ್ನಲಾಗಿದೆ. ರೆಡ್ಡಿ, ಈಶ್ವರಪ್ಪ ಜೊತೆ ನಡೆಸಿದ ಮಾತುಕತೆ ಕೂಡ ವಿಫಲಗೊಂಡ ನಂತರ ಮೂವರು ಭಿನ್ನರು ಮತ್ತೆ ಭಿನ್ನರ ಪಾಳಯಕ್ಕೆ ಸೇರಿಕೊಂಡರು.
ರೆಡ್ದಿಗೆ ಬೇಕು, ಸಿಎಂಗೆ ಬೇಡ: ಮುಖ್ಯವಾಗಿ ವ್ಯಾವಹಾರಿಕ ದೃಷ್ಠಿಯಿಂದ ಜನಾರ್ಧನ ರೆಡ್ಡಿ ಆನಂದ್ ಅಸ್ನೋಟಿಕರ್ ಅವರನ್ನು ಮತ್ತೆ ಬಿಜೆಪಿಗೆ ತರಲು ಮುಂದಾಗಿದ್ದಾರೆನ್ನಲಾಗಿದೆ. ಕಾರವಾರ ಬಂದರಿನ ಮೂಲಕ ಅದಿರು ರಫ್ತಿಗೆ ಅಸ್ನೋಟಿಕರ್ ಸಹಕಾರ ಅವಶ್ಯಕ ಎಂದು ಮನಗಂಡು ರೆಡ್ಡಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆಂದು ತಿಳಿದು ಬಂದಿದೆ. ಆದರೆ, ಅನರ್ಹರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದು ಬೇಡ ಎಂದು ಈಶ್ವರಪ್ಪ ಅವರಿಗೆ ಯಡಿಯೂರಪ್ಪ ಅವರು ಪತ್ರ ಬರೆದಿದ್ದಾರೆ. ಒಟ್ಟಿನಲ್ಲಿ ಅತೃಪ್ತರು ಮತ್ತೆ ಅತಂತ್ರ ಸ್ಥಿತಿಯಲ್ಲಿದ್ದಾರೆ.