ದೇಶದ್ರೋಹ ಭಾಷಣ ವಿವಾದ ಆರುಂಧತಿ ಪ್ರತಿಕ್ರಿಯೆ
ನಕ್ಸಲ್ ಬೆಂಬಲಿತ ಸಾಹಿತಿ ಅರುಂಧತಿ ರಾಯ್ ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಬೆಂಬಲಿಸುವ ಮಾತುಗಳನ್ನು ಆಡಿದ್ದಲ್ಲದೆ, ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲವಿದೆ ಎಂದಿದ್ದರು. ಕೊಯಿಲೀಶನ್ ಆಫ್ ಸಿವಿಲ್ ಸೊಸೈಟೀಸ್ (ಸಿಸಿಎಸ್) ಶ್ರೀನಗರದಲ್ಲಿ ಆಯೋಜಿಸಿದ 'Whither Kashmir? Freedom or Enslavement' ವಿಚಾರಸಂಕಿರಣದಲ್ಲಿ, 'ಕಾಶ್ಮೀರ ಎಂದೂ ಭಾರತದ ಭಾಗವಾಗಿ ಇರಲೇ ಇಲ್ಲ' ಎಂದು ಅರುಂಧತಿ ವಾದಿಸಿದ್ದರು.
ಅನೇಕ ನಕ್ಸಲ್-ವಾಮಪಂಥೀಯ ಬುದ್ಧಿಜೀವಿಗಳು ಜೆಹಾದಿ ಭಯೋತ್ಪಾದನೆಗೆ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಮಾಹಿತಿ ಸಿಕ್ಕಿರುವ ಸಮಯದಲ್ಲಿ ವಿವಾದಿತ ಲೇಖಕಿಯ ಈ ಮಾತುಗಳಿಗೆ ರಾಜಕೀಯ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅರುಂಧತಿ ಹೇಳಿಕೆಗಳು ದುರದೃಷ್ಟಕರ, ವಾಕ್ ಸ್ವಾತಂತ್ರ್ಯದ ಹರಣ ಎಂದು ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೋಯ್ಲಿ ಪ್ರತಿಕ್ರಿಯಿಸಿದ್ದಾರೆ. ಬೂಕರ್ ಪ್ರಶಸ್ತಿ ವಿಜೇತ ಲೇಖಕಿಯ ಭಾಷಣದ ಪ್ರತಿಯನ್ನು ಹಿಡಿದು ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಕಾನೂನು ತಜ್ಞರೊಡನೆ ಸಮಾಲೋಚನೆ ನಡೆಸಿರುವ ಪೊಲೀಸರು ಇನ್ನೂ ಕೇಸ್ ದಾಖಲಿಸಿಲ್ಲ.
ದೇಶಾದ್ಯಂತ ಪ್ರತ್ಯೇಕತಾವಾದಿ ಹೋರಾಟಗಳಲ್ಲಿ ತಾನು ಪಾಲ್ಗೊಂಡಿರುವುದಕ್ಕೆ ಸ್ವಯಂ ಹೆಮ್ಮೆಪಟ್ಟುಕೊಂಡ ರಾಯ್, ಕಾಶ್ಮೀರದಲ್ಲಿ ಪಂಡಿತರು, ಮಹಿಳೆಯರು, ಅಮಾಯಕರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ಮೊದಲು ಹತ್ತಿಕ್ಕುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಮಾವೋವಾದಿ ನಾಯಕ ವರವರರಾವ್, ಹುರಿಯತ್ ಸಂಘಟನೆ ಮುಖಂಡ ಸೈಯದ್ ಗಿಲಾನಿ ಸೇರಿದಂತೆ ಅನೇಕ ಮುಖಂಡರು ಕಾಶ್ಮೀರ ಸ್ವಾತಂತ್ರ್ಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.