ಶಾಸಕರೆ ದಯವಿಟ್ಟು ಪಕ್ಷಾಂತರ ಮಾಡ್ಬೇಡಿ
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡಿದರೆ ಆ ಕ್ಷೇತ್ರದ ಜನತೆಗೆ ಅಪಮಾನ ಮಾಡಿದಂತೆ ಆಗುತ್ತದೆ. ಅಲ್ಲದೇ ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದರಿಂದ ಅನಾವಶ್ಯಕವಾಗಿ ಚುನಾವಣೆಗಳು ಎದುರಾಗಿ ಜನರ ಮೇಲೆ ಹೊರೆ ಬೀಳಲಿದೆ. ಹೀಗಾಗಿ ಶಾಸಕರು ಪಕ್ಷಾಂತರ ಮಾಡಬಾರದು. ಇದು ನನ್ನ ಕಳಕಳಿಯ ವಿನಂತಿ ಎಂದರು.
ಆಪರೇಷನ್ ಕಮಲ ಮಾಡುವಂತೆ ನಾನು ಯಾರಿಗೂ ಹೇಳಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು 25 ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಬರುವುದಾಗಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ನಾನಂತೂ ಶಾಸಕರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ ಎಂದು ಹೇಳಿಲ್ಲ. ಹೇಳುವುದೂ ಇಲ್ಲ ಎಂದು ಯಡಿಯೂರಪ್ಪ ವಿವರಿಸಿದರು.
ಸ್ಪೀಕರ್ ಹುದ್ದೆ ಬಗ್ಗೆ ರೇವಣ್ಣ ಅವರು ಹಗುರವಾಗಿ ಮಾತನಾಡುವುದು ಸರಿಯಲ್ಲ. ಸಂವಿಧಾನಿಕ ಹುದ್ದೆಗಳ ಬಗ್ಗೆ ಮಾತನಾಡುವಾಗ, ಆರೋಪ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ನಾವೇ ಸ್ಪೀಕರ್ ಬಗ್ಗೆ ಹಗುರವಾಗಿ ಮಾತನಾಡಿ ಮರ್ಯಾದೆ ಕೊಡದಿದ್ದರೆ, ಬೇರೆ ಯಾರು ಕೊಡುತ್ತಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಸಂಬಂಧ ಒಮ್ಮೆ ಎಡವಿದ್ದೇನೆ. ಇದರಿಂದ ಸಂಪುಟ ಪುನಾರಚನೆ ಸಂಬಂಧ ಎಚ್ಚರಿಕೆ ವಹಿಸುತ್ತೇನೆ. ಶಾಸಕಾಂಗ ಸಭೆ ಕರೆದು ಎಲ್ಲ ಶಾಸಕರ ಅಭಿಪ್ರಾಯ ಪಡೆಯುತ್ತೇನೆ. ರಾಜ್ಯ ಮುಖಂಡರು ಹಾಗೂ ವರಿಷ್ಠ ಜೊತೆ ಸಮಾಲೋಚನೆ ನಡೆಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.