ಅಜ್ಮೇರ್ ಸ್ಪೋಟದಲ್ಲಿ ಆರ್ ಎಸ್ಎಸ್ ಕೈವಾಡ!
2005 ಅಕ್ಟೋಬರ್ 31ರಂದು ಜೈಪುರದ ಗುಜರಾತಿ ಅತಿಥಿ ಗೃಹದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಆರ್ಎಸ್ ಎಸ್ ನಾಯಕ ಇಂದ್ರೇಶ್ ಕುಮಾರ್ ಉಪಸ್ಥಿತರಿದ್ದರು. ಆ ಸಭೆಯಲ್ಲಿ ಇತರ ಆರು ಕಾರ್ಯಕರ್ತರೂ ಭಾಗವಹಿಸಿದ್ದರು ಎಂಬ ಮಾಹಿತಿ ಸೇರಿದಂತೆ 806 ಪುಟಗಳ ಆರೋಪ ಪಟ್ಟಿಯನ್ನು ಎಟಿಎಸ್, ಅಜ್ಮೀರ್ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಿದೆ.
2007ರ ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಇಂದ್ರೇಶ್ ಅವರ ಪಾತ್ರ ಇದೆಯೇ ಎಂಬುದನ್ನು ತಿಳಿಯಲು ಇನ್ನೂ ಹೆಚ್ಚಿನ ತನಿಖೆ ನಡೆಯಬೇಕಿರುವುದರಿಂದ ಆರೋಪ ಪಟ್ಟಿಯಲ್ಲಿ ಅವರನ್ನು ಆರೋಪಿ ಎಂದು ಪರಿಗಣಿಸಿಲ್ಲ ಎಂದು ಎಟಿಎಸ್ ಮೂಲಗಳು ತಿಳಿಸಿವೆ. ಸತ್ಯ ಇನ್ನೂ ಹೊರಬಂದಿಲ್ಲ, ನಂತರ ಆರ್ಎಸ್ಎಸ್ ಅದನ್ನು ಒಪ್ಪಿಕೊಳ್ಳಬೇಕು. ಆರೋಪ ಪಟ್ಟಿಯಲ್ಲಿ ಸೂಚಿಸಿರುವ ನಾಯಕನ ಹಿನ್ನೆಲೆ ಸದ್ಯದಲ್ಲೇ ತಿಳಿಯಲಿದೆ. ನ್ಯಾಯಾಂಗದ ಬಗ್ಗೆ ವಿಶ್ವಾಸವಿರಬೇಕು. ಸತ್ಯ ಬಹಿರಂಗವಾಗುವುದು, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗು ವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಆರೋಪ ಪಟ್ಟಿಯಲ್ಲಿ ಇರುವ ಐವರು ಆರೋಪಿಗಳ ಹೆಸರಿನ ಜತೆ ಅಭಿನವ್ ಭಾರತ್ ಎಂಬ ಹಿಂದೂ ಸಂಘಟನೆಯೊಡನೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾದ ದೇವಂದ್ರ ಗುಪ್ತಾ ಅವರ ಹೆಸರೂ ಇದೆ. ಆರೋಪಿಗಳ ವಿರುದ್ಧ ಕೊಲೆ ಹಾಗೂ ಧಾರ್ಮಿಕ ಸ್ಥಳ ನಾಶ ಪಡಿಸಿರುವ ಆರೋಪ ಮಾಡಲಾಗಿದೆ. ಪ್ರಕರಣದ ಇತರ ಆರೋಪಿಗಳಾದ ಸಂದೀಪ್ ದಂಗೆ ಹಾಗೂ ರಾಮಜೀ ಕಲ್ಸಂಗ್ರೆ ತಲೆ ಮರೆಸಿಕೊಂಡಿದ್ದು, ಮತ್ತೊಬ್ಬ ಆರೋಪಿ ಸುನೀಲ್ ಜೋಶಿ ವಿಚಾರಣೆ ವೇಳೆ ಮೃತಪಟ್ಟಿದ್ದರು.