ಗುಂಡೂರಾವ್, ಕೃಷ್ಣ ಸರ್ಕಾರಕ್ಕೆ ಆದ ಗತಿ ಯಡ್ಡಿಗೆ
ನವೆಂಬರ್ 3 ರ ಬುಧವಾರ ಪಾದಯಾತ್ರೆ ಬೆಂಗಳೂರನ್ನು ತಲುಪಲಿದೆ. ನವೆಂಬರ್ 4 ರ ಶುಕ್ರವಾರ ಪ್ರತಿಭಟನಾಕಾರರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗೃಹ ಕಚೇರಿಯಲ್ಲಿ ಭೇಟಿ ಆಗಿ ಮನವಿ ಸಲ್ಲಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
ರೈತರ ಬೇಡಿಕೆ: ಪ್ರತಿ ಎಕರೆಗೆ ಕನಿಷ್ಠ 77 ಲಕ್ಷ ರುಪಾಯಿ ಪರಿಹಾರ ನೀಡಲು ಆಗ್ರಹಿಸಿ ಬ್ರಹ್ಮಿಣಿ, ಲಕ್ಷ್ಮಿಮಿತ್ತಲ್ ಮತ್ತು ಭೂಷಣ್ ಸ್ಟೀಲ್ಸ್ನ ಭೂ ಸಂತ್ರಸ್ತರು ಹಮ್ಮಿಕೊಂಡಿರುವ 'ಬೆಂಗಳೂರು ಚಲೋ ಪಾದಯಾತ್ರೆ' ಶುಕ್ರವಾರ ಕುಡತಿನಿಯಲ್ಲಿ ಪ್ರಾರಂಭವಾಗಿದೆ.
ಬಂಡವಾಳಶಾಹಿಗಳಿಗೆ ರೆಡ್ಕಾರ್ಪೆಟ್ ಸ್ವಾಗತ ಕೋರುತ್ತಿರುವ ರಾಜ್ಯ ಸರ್ಕಾರ ರೈತರನ್ನು ವಂಚಿಸುತ್ತಿದೆ. ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿ ವಿಚಾರಗಳನ್ನು ಪ್ರಸ್ತಾಪಿಸುತ್ತಲೇ ರೈತರನ್ನು ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ. ನವಲಗುಂದ - ನರಗುಂದ ರೈತ ಹೋರಾಟಗಳ ಮೂಲಕ ರಾಜ್ಯದಲ್ಲಿ ರೈತಪರ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ ಎಂದು ಮಾರುತಿ ಹೇಳಿದರು.
ಬ್ರಹ್ಮಿಣಿ ಬಂಡವಾಳ ಬಯಲು: ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ ಅವರ ಬ್ರಹ್ಮಿಣಿ ಸ್ಟೀಲ್ ಕಾರ್ಖಾನೆ ಆಂಧ್ರದ ಕಡಪದಲ್ಲಿ ಪ್ರಾರಂಭವಾಗಿಲ್ಲ. ಸಾವಿರಾರು ಎಕರೆ ಭೂಮಿಯನ್ನು ಸರ್ಕಾರದಿಂದ ಕಡಿಮೆ ಬೆಲೆಗೆ ಪಡೆದು ದೊಡ್ಡ ಮೊತ್ತಕ್ಕೆ ಒತ್ತೆ ಇಟ್ಟು ಈಗ ಮಾರಾಟ ಮಾಡುವ ಹಂತಕ್ಕೆ ಬಂದಿದೆ. ಬಳ್ಳಾರಿಯ ಕುಡತಿನಿಯಲ್ಲಿ ಕೂಡ ಈ ಕೈಗಾರಿಕೆ ಪ್ರಾರಂಭ ಆಗುವುದು ಅನುಮಾನ ಎಂದು ರೈತ ಮುಖಂಡ ನಾಗರಾಜ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ ಅವರ ಆಂಧ್ರದಲ್ಲಿಯ ವ್ಯವಹಾರ ಕುರಿತು ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾದ ಮಾಹಿತಿ ಇದ್ದರೂ ಕೂಡ, ಕುಡತಿನಿ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಾವಿರಾರು ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ನೀಡುತ್ತಿರುವುದು ಆಶ್ಚರ್ಯಕರ ಎಂದು ಮುಂಡರಗಿ ನಾಗರಾಜ್ ತೀವ್ರ ಆತಂಕ ವ್ಯಕ್ತಪಡಿಸಿದರು.
ಮಿತ್ತಲ್ ಕಂಪನಿಯು ರೈತರಿಗೆ ಹೆಚ್ಚಿನ ಪರಿಹಾರ ನೀಡಿ ಭೂಮಿಯನ್ನು ಪಡೆಯಲು ಆಸಕ್ತಿ ಹೊಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ ಅವರು ರೈತ ವಿರೋಧಿ ನಿಲುವು ತಾಳಿ ತಮ್ಮ ಮಾಲೀಕತ್ವದ ಕೈಗಾರಿಕೆಗೆ ಕೂಡ ಹೆಚ್ಚಿನ ಪರಿಹಾರ ನೀಡಬೇಕಾಗುತ್ತದೆ ಎನ್ನುವ ಸ್ವಾರ್ಥಕ್ಕಾಗಿ ಕಡಿಮೆ ಬೆಲೆಯನ್ನು ನಿಗಧಿ ಮಾಡಿಸಿದ್ದಾರೆ. ಇದು ಅವರ ರೈತ ವಿರೋಧಿ ನಿಲುವಿಗೆ ಸಾಕ್ಷಿ ಎಂದರು.
ಹಸಿರುಸೇನೆ, ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘ, ಸಿಪಿಐ, ಸಿಪಿಐ(ಎಂ), ದಲಿತ ಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು, ಕುಡತಿನಿ, ಹರಗಿನಡೋಣಿ, ಸಿದ್ಧಮ್ಮನಹಳ್ಳಿ, ವೇಣಿವೀರಾಪುರ, ಎರ್ರಂಗಳಿ, ಕೊಳಗಲ್ಲು, ಕೊಟಗಿನಹಾಳ್, ವಡ್ಡು, ತಾಳೂರು, ಗಾದಿಗನೂರು ಸೇರಿ ವಿವಿಧ ಗ್ರಾಮಗಳ ರೈತರು ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS