ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ರಾಜೀನಾಮೆ
ಕರ್ನಾಟಕ ಹೈಕೋರ್ಟಿನಲ್ಲಿ ಶಾಸಕರ ಅನರ್ಹತೆ ಕುರಿತ ವಿಚಾರಣೆ ನಡೆಯುತ್ತಿರುವಾಗಲೇ 'ಆಪರೇಷನ್ ಕಮಲ'ವನ್ನು ಬಿಜೆಪಿ ತೀವ್ರಗೊಳಿಸಿದೆ. ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರು ಕೋಲಾರ ಜಿಲ್ಲೆಯ ನಾರಾಯಣಸ್ವಾಮಿ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಇಲ್ಲಿಯವರೆಗೆ ಒಟ್ಟು ಮೂವರು ಬಲಿಯಾಗಿದ್ದಾರೆ. ಮೊದಲು ಚನ್ನಪಟ್ಟಣದ ಶಾಸಕ ಎಂಸಿ ಅಶ್ವತ್ಥ್, ಜಗಳೂರಿನ ಶಾಸಕ ಎಸ್ ವಿ ರಾಮಚಂದ್ರ ಮತ್ತು ಈಗ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ. ಇವರ ಜೊತೆಗೆ ಇನ್ನೂ ಮೂರು ನಾಲ್ಕು ಕಾಂಗ್ರೆಸ್ಸಿಗರು ಬಿಜೆಪಿ ಸೇರಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಆಕ್ರೋಶ : ಆಪರೇಷನ್ ಕಮಲಕ್ಕೆ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂವಿಧಾನಕ್ಕೆ ಅಪಚಾರ ಬಗೆಯುತ್ತಿದೆ. ಇದರ ವಿರುದ್ಧ ರಾಜ್ಯಪಾಲರಿಗೆ, ಪ್ರಧಾನಿಗೆ ಮತ್ತು ರಾಷ್ಟ್ರಪತಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮಧ್ಯಪ್ರವೇಶಿಸಿ ಸರಕಾರ ವಜಾ ಗೊಳಿಸಲು ಶಿಫಾರಸು ಮಾಡಬೇಕು. ಬಿಜೆಪಿಯವರೇ ಆದ ಸ್ಪೀಕರ್ ಬೋಪಯ್ಯ ಈ ಆಪರೇಷನ್ ಕಮಲದಲ್ಲಿ ಶಾಮೀಲಾಗಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ತೀವ್ರವಾಗಲಿದೆ. ಅವಶ್ಯಕತೆ ಬಿದ್ದರೆ ಎಲ್ಲ ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸುವುದಾಗಿ ದೇಶಪಾಂಡೆ ಹೇಳಿದರು.
ಈಗಾಗಲೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಇದೇ ಮಾತನ್ನು ಹೇಳಿದ್ದಾರೆ. ಬಿಜೆಪಿ ಇದೇ ರೀತಿ ಆಪರೇಷನ್ ಕಮಲ ಮುಂದುವರಿಸಿದರೆ ಎಲ್ಲ 27 ಶಾಸಕರು ರಾಜೀನಾಮೆ ಸಲ್ಲಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ಕೆಜಿ ಬೋಪಯ್ಯ ಒಬ್ಬ ಅಯೋಗ್ಯ ಮನುಷ್ಯ ಎಂದು ಕೆಂಡ ಕಾರಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಕೂಡ ಹರಿಹಾಯ್ದ ಅವರು, ಕೇಂದ್ರ ಜವಾಬ್ದಾರಿಯುತವಾಗಿ ವರ್ತಿಸಿದ್ದರೆ ಕರ್ನಾಟಕದಲ್ಲಿ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.