ಸರಣಿ ಹಂತಕ ವಿಕೃತ ಕಾಮಿ ಗಿರೀಶ್ ಬಂಧನ
ಸರಣಿ ಹಂತಕ, ವಿಕೃತ ಕಾಮಿಯ ಹೆಸರು ಗಿರೀಶ್. ವಯಸ್ಸು 26. ಈತನ ಹೇಳಿಕೆ ಪ್ರಕಾರ 4 ಹೆಣ್ಣುಮಕ್ಕಳನ್ನು ಹತ್ಯೆಗೈದಿದ್ದಾನೆ. ಆದರೆ ಇನ್ನಷ್ಟು ಕೊಲೆ ಮಾಡಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಂಡ್ಯ ಜಿಲ್ಲೆಯ ಕೊಮ್ಮೇರಹಳ್ಳಿ ಗ್ರಾಮದ ಚೌಡಯ್ಯ ಎಂಬುವರ ಮಗನಾದ ಈತ 4ನೇ ತರಗತಿಯವರೆಗೆ ಓದಿದ್ದ. ಬಳಿಕ ಶಾಲೆ ಬಿಟ್ಟು ಸೈಕಲ್ ಶಾಪ್ ಸೇರಿದ ಈತ ಅಲ್ಲಿ ಕೆಲವು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿಕೊಂಡಿದ್ದ. ಬಳಿಕ ಬಸರಾಳುವಿನ ದೇವಸ್ಥಾನದ ಬಳಿ ತಾನೇ ಸ್ವಂತ ಸೈಕಲ್ ಶಾಪ್ ಮಾಡಿ ಕೆಲವು ಸಮಯಗಳ ಕಾಲ ಕೆಲಸ ಮಾಡಿದನಾದರೂ ಏಣಿಯಿಂದ ಜಾರಿ ಬಿದ್ದಿದ್ದರಿಂದ ಎಡ ಕಾಲಿಗೆ ಪೆಟ್ಟು ಬಿದ್ದಿತು. ಹೀಗಾಗಿ ಸೈಕಲ್ ಶಾಪ್ ಮುಚ್ಚಿದ.
ಇದಾದ ಕೆಲವು ಸಮಯದ ಬಳಿಕ ಮಂಡ್ಯದ ರೌಡಿ ಚೀರನಹಳ್ಳಿಯ ಶಂಕರನ ಸೈಕಲ್ ಶಾಪ್ಗೆ ಸೇರಿದ ಈತ ಅಲ್ಲಿದ್ದಾಗ ಶಂಕರನ ಎದುರಾಳಿ ಎಸ್.ಕೆ.ರಾಮಣ್ಣನ ಸಂಬಂಧಿ ಇಂಜಿನಿಯರಿಂಗ್ ವಿದ್ಯಾರ್ಥಿ ಕಿಶೋರ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗುವುದರೊಂದಿಗೆ ಪಾತಕ ಲೋಕಕ್ಕೆ ಎಂಟ್ರಿ ಪಡೆದ. ಈ ಪ್ರಕರಣದಲ್ಲಿ ಒಂದು ವರ್ಷ ಏಳು ತಿಂಗಳು ಜೈಲಿನಲ್ಲಿದ್ದು ಆ ನಂತರ ಖುಲಾಸೆಗೊಂಡು ಜೈಲಿನಿಂದ ಹೊರಬಂದಿದ್ದ.
ಹಾಗೆ ಬಂದವನು ಬೆಂಗಳೂರು ಸೇರಿಕೊಂಡ. ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಸಹಕಾರ್ಮಿಕನ ಪತ್ನಿಯ ಪರಿಚಯವಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ಪಡೆದ. ದೈಹಿಕ ಸುಖದ ರುಚಿಕಂಡ ಈತ ವೇಶ್ಯೆಯರ ಸಂಪರ್ಕ ಬೆಳೆಸತೊಡಗಿದ. ಅವರನ್ನು ಲಾಡ್ಜ್, ಕಬ್ಬಿನಗದ್ದೆ, ಹೀಗೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರೊಂದಿಗೆ ಎರಡೆರಡು ಬಾರಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದುದಲ್ಲದೆ, ಬಳಿಕ ತಾನು ಕೊಟ್ಟ ಹಣವನ್ನು ಕೇಳುತ್ತಿದ್ದ. ಅವರು ಕೊಡಲು ಒಪ್ಪದಿದ್ದಾಗ ಅವರ ಚೂಡಿದಾರದ ವೇಲ್ ಅಥವಾ ಸೀರೆಯಿಂದಲೇ ಕತ್ತು ಬಿಗಿದು ಹತ್ಯೆ ಮಾಡುತ್ತಿದ್ದ. ಬಳಿಕ ಅವರಿಗೆ ತಾನು ನೀಡಿದ್ದ ಹಣ ಹಾಗೂ ಅವರ ಬಳಿಯಲ್ಲಿದ್ದ ಹಣವಲ್ಲದೆ, ಕಿವಿಯ ಓಲೆ, ಮೊಬೈಲ್ ಹೀಗೆ ಎಲ್ಲವನ್ನೂ ಕಿತ್ತುಕೊಂಡು ಪರಾರಿಯಾಗಿಬಿಡುತ್ತಿದ್ದ.
ಈತ ಕಳೆದ ಫೆ.18 ಹಾಗೂ ಜು.22ರಂದು ಮದ್ದೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಕೊಲೆ, ಸೆ.18ರಂದು ಮೈಸೂರಿನ ವಿಘ್ನೇಶ್ವರ ಲಾಡ್ಜ್ನಲ್ಲಿ ಒಬ್ಬಳು ಮಹಿಳೆಯ ಕೊಲೆ, ಅ.1ರಂದು ಮಂಡ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದ.
ಆದರೆ ಇದರ ನಡುವೆ ಇನ್ನೆಷ್ಟು ಹೆಣ್ಣು ಮಕ್ಕಳ ಪ್ರಾಣ ತೆಗೆದಿದ್ದಾನೋ ಗೊತ್ತಿಲ್ಲ. ಮೈಸೂರು ಲಾಡ್ಜ್ನಲ್ಲಿ ನಡದ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಲಷ್ಕರ್ ಪೊಲೀಸರು ಲಾಡ್ಜ್ನಲ್ಲಿ ಸಿಕ್ಕ ಕೆಲವು ಸಾಕ್ಷಿಗಳನ್ನು ಹಿಡಿದು ಹೊರಟಿದ್ದರು. ಕೊನೆಗೂ ಬೆಂಗಳೂರಿನ ರೈಲ್ವೆ ನಿಲ್ದಾಣದ ಮುಂಭಾಗದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಂಡರ್ಪಾಸ್ನಲ್ಲಿ ನಿಂತು ವೇಶ್ಯೆಯರಿಗಾಗಿ ಕಾಯುತ್ತಿದ್ದ ಹೊತ್ತಿನಲ್ಲಿ ಮಾಹಿತಿ ಪಡೆದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈತ ತಾನು ಮಾಡಿರುವ ಪಾತಕವನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿರುವ ಈತನ ವಿಚಾರಣೆ ಇನ್ನೂ ಮುಂದವರೆದಿದೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7