ನೂರು ಮಂದಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ
ಕಳೆದ ಮತ್ತು ಈ ವರ್ಷ ಸೇರಿ ಒಟ್ಟು 100 ಮಂದಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ ಸಮಿತಿ ರಚಿಸಿ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಆರ್ ಅಶೋಕ್, ಸುರೇಶ್ ಕುಮಾರ್ ಹಾಗೂ ವಿ ಎಸ್ ಆಚಾರ್ಯ ಸೇರಿದಂತೆ ವಿವಿಧ ಅಕಾಡಮಿಗಳ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳೂ ಸಮಿತಿಯಲ್ಲಿದ್ದಾರೆ. ಇಲಾಖೆಯ ನಿರ್ದೇಶಕರು ಸಮಿತಿಯ ಕಾರ್ಯದರ್ಶಿಗಳಾಗಿರುತ್ತಾರೆ.
ತಲಾ 1 ಲಕ್ಷ ರುಪಾಯಿ ನಗದು ಮತ್ತು 20 ಗ್ರಾಂ ಚಿನ್ನ ಒಳಗೊಂಡಿರುವ ಪ್ರಶಸ್ತಿಗೆ ಈಗಾಗಲೇ 2,900 ಅರ್ಜಿಗಳು ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕಳೆದ ವರ್ಷ ಪ್ರಶಸ್ತಿ ನೀಡದ ಕಾರಣ ಈ ವರ್ಷ ಎರಡು ವರ್ಷಗಳನ್ನು ಸೇರಿಸಿ 100 ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನವೆಂಬರ್ 1ರಂದು ರಾಜ್ಯೋತ್ಸವ ಆಚರಿಸಲಾಗುವುದು.