ಧಾರಾಕಾರ ಮಳೆಗೆ ಬೆಂಗಳೂರು ಜನತೆ ತತ್ತರ
ಗುಡುಗು ಸಮೇತ ಸುರಿಯುತ್ತಿರುವ ಮಳೆಯಿಂದಾಗಿ ಈಜಿಪುರ, ಕೋರಮಂಗಲ, ಎಚ್ಎಸ್ಆರ್ ಲೇಔಟ್, ಮಡಿವಾಳ, ಜಯನಗರ, ವಿಲ್ಸನ್ ಗಾರ್ಡನ್ ನಲ್ಲಿರುವ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಈಜಿಪುರದಲ್ಲಿರುವ ಜನ ಅಕ್ಷರಶಃ ಮಳೆ ನೀರಿನಲ್ಲಿ ಈಜಾಡುವಂತಾಗಿದೆ. ಮಳೆನೀರು ಈಜಿಪುರದ ಅನೇಕ ಮನೆಗಳಿಗೆ ನುಗ್ಗಿದ್ದು, ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಭಾರೀ ಮಳೆ ಸುರಿದು ಗಾಳಿ ಆಂಜನೇಯ ದೇವಸ್ಥಾನಕ್ಕೆ ನುಗ್ಗಿ ಮಾಡಿದ ಹಾವಳಿಯಿಂದ ಮೇಲಾದರು ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಂದುಕೊಂಡಿದ್ದೆವು. ಆದರೆ, ಇಲ್ಲಿ ಮಳೆ ನೀರು ಸರಾಗವಾಗಿ ಹೋಗುವಂತೆ ಏನೂ ಮಾಡಿಲ್ಲ ಎಂದು ಅಧಿಕಾರಿಗಳನ್ನು ನಿಂದಿಸುತ್ತಿದ್ದಾರೆ.
ಸುಮಾರು ಎರಡು ಗಂಟೆಗಳಿಂದ ಮಳೆ ಹುಯ್ಯುತ್ತಿದ್ದು ಇದು ಸಂಜೆತನ ಮುಂದುವರಿಯುಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಚರಂಡಿಗಳು ಕಟ್ಟಿಕೊಂಡಿದ್ದರಿಂದ ಮಳೆ ನೀರು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ನಾಲ್ಕಚಕ್ರ ವಾಹನ ಚಾಲಕರು ಪರದಾಡುತ್ತಿದ್ದಾರೆ.
ಮಳೆ ನೀರು ತುಂಬಿಕೊಂಡು ಸಂಕಷ್ಟಕ್ಕೀಡಾಗಿರುವ ಜನತೆ 2222 1188 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಬಿಬಿಎಂಪಿ ಅಧಿಕಾರಿಗಳಿಂದ ಸಹಾಯವನ್ನು ಯಾಚಿಸಬಹುದು. ಮಳೆ ಶುಕ್ರವಾರವೂ ಮುಂದುವರಿಯುವ ಸಾಧ್ಯಯಿದೆ ಎಂದು ಹವಾಮಾನ ಇಲಾಖೆ ಹೇಳಿರುವುದರಿಂದ ಜನ ಕೊಡೆ ಹಿಡಿದುಕೊಂಡು ಓಡಾಡುವುದು ಕ್ಷೇಮ.