ಕಾಂಗ್ರೆಸ್ ಜೆಡಿಎಸ್ ನಿಂದ ವಿಶ್ವಾಸಮತ ಬಹಿಷ್ಕಾರ?
ಎರಡನೇ ಬಾರಿ ವಿಶ್ವಾಸಮತ ಯಾಚನೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೇಳಿಕೊಂಡಿರುವುದು ಅಸಂವಿಧಾನಿಕವಾಗಿದ್ದು, ಅದನ್ನು ಮುಂದೂಡಬೇಕೆಂದು ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರಿಗೆ ಪತ್ರ ಕಳಿಸುವುದಾಗಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಕೂಡ ನಿನ್ನೆ ಇದೇ ಪ್ರಯತ್ನಕ್ಕೆ ಕಾಂಗ್ರೆಸ್ ಜೊತೆ ಕೈಹಾಕಿದ್ದರು. ಕರ್ನಾಟಕ ಹೈಕೋರ್ಟ್ ನಲ್ಲಿ ಅನರ್ಹಗೊಂಡ ಪಕ್ಷೇತರರಿಗೆ ಮತದಾನ ಮಾಡಲು ಅವಕಾಶವಿಲ್ಲವೆಂದು ಆದೇಶ ಹೊರಬಿದ್ದ ಕೂಡಲೆ ಕಾಂಗ್ರೆಸ್ ನಾಯಕರ ಜೊತೆ ಕುಮಾರಸ್ವಾಮಿ ರಾಜ್ಯಪಾಲರ ಬಳಿ ಧಾವಿಸಿದ್ದರು. ಹೈಕೋರ್ಟ್ ತೀರ್ಪು ಬಂದ ನಂತರ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸಬೇಕೆಂದು ಕುಮಾರ್ ಆಗ್ರಹಿಸಿದ್ದರು.
ಇನ್ನೊಂದು ಆಶ್ಚರ್ಯಕರ ಬೆಳವಣಿಗೆಯೆಂದರೆ, ಕಾಂಗ್ರೆಸ್ ನ 16 ಶಾಸಕರು ವಿಶ್ವಾಸಮತ ಯಾಚನೆಯಿಂದ ದೂರವುಳಿಯಲಿದ್ದಾರೆ ಎಂಬ ಮಾತುಗಳು ವಿಧಾನಸೌಧದ ಗೋಡೆಗಳಿಗೆ ಅಪ್ಪಳಿಸುತ್ತಿವೆ. ಇದಕ್ಕೆ ಕಾರಣ ಮಾತ್ರ ನಿಗೂಢ. ಕಾಂಗ್ರೆಸ್ ನಾಯಕರು ಈ ಗಾಳಿಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತಿದ್ದಾರೆ. ಎಲ್ಲ 73 ಶಾಸಕರು ಸದನದಲ್ಲಿ ಉಪಸ್ಥಿತರಿರುತ್ತಾರೆ ಎಂದು ಹೇಳುತ್ತಿದ್ದಾರೆ. ಈ ಗಾಳಿಸುದ್ದಿಗೆ ಗಾಳಿ ಆಂಜನೇಯನ ಪ್ರಭಾವವೇ ಕಾರಣವೆ?
ನಿನ್ನ ಚಾನ್ಸರಿ ಹೊಟೇಲಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅನೇಕ ಶಾಸಕರು ಹೈಕಮಾಂಡ್ ವಿರುದ್ಧ ದನಿಯೆತ್ತಿದ್ದರು. ಹೈಕಮಾಂಡ್ ಅಸಹಕಾರದ ವಿರುದ್ಧ ರಾಜೀನಾಮೆ ಬಿಸಾಕುವ ಬೆದರಿಕೆಯೊಡ್ಡಿದ್ದರು.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7