ಕರ್ನಾಟಕಕ್ಕೆ ಗೌರವ ತಂದ ಎನ್ನಾರೈ ಗೌಡ
ಆದರೆ, ಕಾಮನ್ವೆಲ್ತ್ ಕ್ರೀಡೆಗಳ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಐದು ದಶಕಗಳ ನಂತರ ಚಿನ್ನದ ಪದಕವೊಂದನ್ನು ಗೆದ್ದುಕೊಡುವ ಕನ್ನಡ ಕುವರನ ಕನಸು ಭಾನುವಾರ ನನಸಾಗಲಿಲ್ಲ. ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಸೇರಿದ್ದ 50 ಸಾವಿರ ಜನರ ಬೆಂಬಲದೊಂದಿಗೆ ಚಿನ್ನದ ನಿರೀಕ್ಷೆ ಮೂಡಿಸಿದ್ದ ವಿಕಾಸ್ ಗೌಡ ಪುರುಷರ ಡಿಸ್ಕಸ್ ಎಸೆತದಲ್ಲಿ ರಜತ ಪದಕ ಗೆದ್ದರು.
19ನೇ ಕಾಮನ್ವೆಲ್ತ್ ಕ್ರೀಡೆಗಳ ಅಥ್ಲೆಟಿಕ್ಸ್ನಲ್ಲಿ ಬಂದ ಮೊದಲ ಬೆಳ್ಳಿ ಪದಕ ಇದು. 1958 ರಲ್ಲಿ ಮಿಲ್ಖಾಸಿಂಗ್ 440 ಯಾರ್ಡ್ ಓಟದಲ್ಲಿ ಚಿನ್ನ ಗೆದ್ದ ಮೇಲೆ ಭಾರತಕ್ಕೆ ಇದುವರೆಗೂ ಚಿನ್ನದ ಪದಕ ಬಂದಿಲ್ಲ. ಇವರ ನಂತರ ಮಹಿಳೆಯರ ಲಾಂಗ್ಜಂಪ್ನಲ್ಲಿ ಭಾರತದ ಎಂ.ಎ. ಪ್ರಜೂಷಾ ಕೂಡ ರಜತ ಪದಕ ಗಳಿಸಿದರು.
ಮೈಸೂರು ಮೂಲದ ಅನಿವಾಸಿ ಭಾರತೀಯ ಆರು ಅಡಿ ಒಂಬತ್ತು ಅಂಗುಲ ಎತ್ತರದ ಅಜಾನುಬಾಹು 27 ವರ್ಷದ ವಿಕಾಸ್, 63.69 ಮೀ. ದೂರ ಎಸೆದು ಬೆಳ್ಳಿಪದಕಕ್ಕೆ ಮುತ್ತಿಟ್ಟರು.
ಕ್ರೀಡಾಕೂಟದ ಎರಡನೇ ದಿನವೇ 48 ಕೆಜಿ ವಿಭಾಗದ ವೆಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಕನ್ನಡತಿ ಸಂಧ್ಯಾ ರಾಣಿ ದೇವಿ ಕೊನೆಗೆ ಕಂಚಿನ ಪದಕ ಗಳಿಸಿದ್ದನ್ನು ಸ್ಮರಿಸಬಹುದು. ಇದಲ್ಲದೆ, ಹರ್ಯಾಣಾ ಮೂಲದ ವಿಕಲಾಂಗ ಈಜುಪಟು ಕರ್ಮಾಕರ್ ರಜತ ಪದಕ ಪಡೆದಿದ್ದು, ಈತ ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದರು.
ಉಳಿದಂತೆ, ಹಾಕಿ ಪಂದ್ಯದಲ್ಲಿ ಪಾಕಿಸ್ತಾನವನ್ನು 7-4 ಅಂತರದಿಂದ ಸೋಲಿಸಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಸೋಮದೇವ್ ಪುರುಷರ ಟೆನ್ನಿಸ್ ಫೈನಲ್ ನಲ್ಲಿ ಅಸ್ಟ್ರೇಲಿಯಾದ ಗ್ರೆಗ್ ಜೋನ್ಸ್ ರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ವಿಶ್ವ ಚಾಂಪಿಯನ್ ಸುಶೀಲ್ ಕುಮಾರ್ 65 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS