ಶಾಸಕರ ಭವನದಲ್ಲಿ ಶಂಕರಲಿಂಗೇಗೌಡ ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ಗೌಡರನ್ನು ಕುಟುಂಬದ ಸದಸ್ಯರು ಆರೈಕೆ ಮಾಡಿದರು. ಘಟನೆಯ ಸುದ್ದಿ ತಿಳಿದು ಅಲ್ಲಿಗೆ ಬಿಜೆಪಿ ಮತ್ತು ದಳದ ನಾಯಕರು ಆಗಮಿಸಿದರು. ದಳದ ಬಸವರಾಜ್ ಹೊರಟ್ಟಿ, ಬಂಡೆಪ್ಪ ಖಾಷೆಂಪೂರ ಗೌಡರ ಕೊಠಡಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ಮುಂದಾದರು. ಸ್ಥಳಕ್ಕೆ ಆಗಮಿಸಿದ ವೈ ಎಸ್ ವಿ ದತ್ತಾ ಅಂಬುಲೆನ್ಸ್ ತರಿಸಿದರು. ಅಷ್ಟರಲ್ಲಿ ರಂಗ ಪ್ರವೇಶ ಮಾಡಿದ ಶೋಭಾ ಕರಂದ್ಲಾಜೆ ಗೌಡರ ಆರೋಗ್ಯವನ್ನು ವಿಚಾರಿಸಿ ಜೆಡಿಎಸ್ ನಾಯಕರ ಮಧ್ಯಪ್ರವೇಶವನ್ನು ಆಕ್ಷೇಪಿಸಿದರು.
ಗೌಡರು ನಮ್ಮ ಪಕ್ಷದ ಶಾಸಕರು, ಜೆಡಿಎಸ್ ಮುಖಂಡರಿಗೆ ಇಲ್ಲೇನು ಕೆಲಸ. ಗೌಡರ ಕುಟುಂಬದ ಸದಸ್ಯರು ಅವರ ಆರೋಗ್ಯ ನೋಡಿಕೊಳ್ಳುತ್ತಾರೆ. ಜೆಡಿಎಸ್ ನವರು ಗೌಡರನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಶೋಭಾ ಆಕ್ಷೇಪಿಸಿದರು. ನಂತರ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಶಾಸಕರ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸರು ಬಿಗಿ ಭದ್ರತೆ ಮಾಡಿದರು. ಶಾಸಕರ ಭವನದೊಳಗೆ ಪ್ರವೇಶಿಸಲು ಯತ್ನಿಸಿದ ದತ್ತ ಮತ್ತು ಕಾರ್ಯಕರ್ತರನ್ನು ಪೊಲೀಸರು ತಡೆದರು. ಇದನ್ನು ಖಂಡಿಸಿ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.