ಮತ್ತೆ ಆಪರೇಷನ್ ಕಮಲ : 10 ಕೈಗಳಿಗೆ ಗಾಳ?
ಸರಕಾರ ಅಲ್ಪಮತಕ್ಕೆ ಕುಸಿದರೆ ಕಾಂಗ್ರೆಸ್ ನಿಂದ 10 ಮಂದಿ ಶಾಸಕರನ್ನು ಕರೆ ತರಲು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲ ಮಾಹಿತಿಗಳ ಪ್ರಕಾರ, ಬಿಜೆಪಿ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಕಾಂಗ್ರೆಸ್ ನ ಶಾಸಕರ ಪೈಕಿ ಅರಕಲಗೂಡು ಶಾಸಕ ಮತ್ತು ಉತ್ತರ ಕರ್ನಾಟಕದ ಶಾಸಕರು ಬಿಜೆಪಿ ಕಡೆಗೆ ಬರುವ ಸಾಧ್ಯತೆಯಿದೆ. ಜಾತಿ ಲೆಕ್ಕಾಚಾರ ಹಾಕುವುದಾದರೆ, ಬೇರೆ ಬೇರೆ ಪಕ್ಷದ್ಲಲಿರುವ ಲಿಂಗಾಯತ ಶಾಸಕರು ಮುಖ್ಯಮಂತ್ರಿಗಳ ಕೈಹಿಡಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕೆಲ ಗೌಡ ಶಾಸಕರ ಹೆಸರುಗಳೂ ಕೇಳಿಬಂದಿವೆ.
ಇನ್ನೊಂದಡೆ ರಾಜ್ಯಭವನದಿಂದ ಹೊರಬಂದು ಮಾತನಾಡಿದ ಶಂಕರಲಿಂಗೇಗೌಡ, ಆನಂದ ಅಸ್ನೋಟಿಕರ್, ನರೇಂದ್ರಸ್ವಾಮಿ ಅವರು, ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಹೇಳಿದರು. ಜನತೆ ಹಾಗೂ ರಾಜ್ಯದ ಅಬಿವೃದ್ದಿಗೆ ಈ ಕ್ರಮ ತೆಗೆದುಕೊಂಡಿದ್ದೇವೆ. ರಾಜ್ಯದ ಜನ ಸರಕಾರದ ಕ್ರಮದಿಂದ ನೋವು ಅನುಭವಿಸಿದ್ದಾರೆ ಎಂದು ನರೇಂದ್ರಸ್ವಾಮಿ ಹೇಳಿದರು.
ರಾಜ್ಯ ಸರಕಾರದ ಮುಖ್ಯಸ್ಥರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಪಾರದರ್ಶಕವಾಗಿರಲು ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ತೆಗೆದುಕೊಂಡಿದ್ದೇವೆ ಎಂದು ಅನಂದ ಅಸ್ನೋಟಿಕರ್ ಹೇಳಿದರು. ಮಂತ್ರಿಗಿರಿ ಕೊಡುತ್ತೇನೆಂದು ಹೇಳಿ ಮೋಸ ಮಾಡಿದ್ದಾರೆ. ನಾಲ್ಕು ಬಾರಿ ಸಚಿವರಾಗಿರುವ ನನಗೆ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ ಬೆಂಬಲವನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಶಂಕರಲಿಂಗೇಗೌಡ ನುಡಿದರು.
ಕಾಂಗ್ರೆಸ್ ಶಾಸಕರಾದ ಕೆಬಿ ಚಂದ್ರಶೇಖರ್, ರಾಮಸ್ವಾಮಿಗೌಡ, ಬಾಬುರಾವ್ ಚಿಂಚನಸೂರು, ಪಿಎಂ ಅಶೋಕ್, ಎ ಮಂಜು, ಸುರೇಶಗೌಡ, ಎಂ ಶ್ರೀನಿವಾಸ್, ಸುನೀಲ್ ಹೆಗ್ಡೆ, ರಮೇಶ್ ಬಾಬು ಅವರನ್ನು ಬಿಜೆಪಿಗೆ ತರಲು ಚಿಂತನೆ ನಡೆಸಲಾಗಿದೆ. ಈ ಮಧ್ಯೆ ರಾಜಭವನದ ಬಳಿ ನಡೆದಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಆಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS