ಪತ್ರಕರ್ತ, ಗಾಂಧಿವಾದಿ ಮಾಧವ ಕೌಜಲಗಿ ವಿಧಿವಶ
ತಮ್ಮ ಸುತ್ತಲಿನವರಿಗೆ ಕೌಜಲಗಿ ಅವರು ಸ್ಫೂರ್ತಿಯ ಸೆಲೆಯಾಗಿದ್ದರು. ಆಜನ್ಮ ಖಾದಿಧಾರಿಯಾಗಿ ಮಹಾತ್ಮಾ ಗಾಂಧಿಯವರ ನಿಷ್ಠ ಅನುಯಾಯಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಂಥ ಧುರೀಣರ ನಿಕಟ ಮೈತ್ರಿ ಹೊಂದಿದ್ದರೂ ಸಕ್ರಿಯರಾಗಿ ರಾಜಕೀಯದಿಂದ ದೂರವೇ ಉಳಿದಿದ್ದರು. ತೆರೆಮರೆಯ ಸಮಾಜ ಸೇವೆಯೇ ಕೌಜಲಗಿಯವರಿಗೆ ಅತ್ಯಂತ ಪ್ರಿಯವಾದ ಕಾಯಕವಾಗಿತ್ತು.
ಸ್ವಾತಂತ್ರ್ಯಯೋಧ, ಗಾಂಧಿವಾದಿ ಮತ್ತು ಕರ್ನಾಟಕದ ಖಾದಿ ಗ್ರಾಮೋದ್ಯೋಗದ ಜನಕ ಮತ್ತು ಪ್ರವರ್ತಕರಾಗಿದ್ದ ಹನುಮಂತರಾವ್ ಕೌಜಲಗಿಯವರ ಏಕಮಾತ್ರ ಪುತ್ರರಾಗಿ ಮಾಧವ ಕೌಜಲಗಿಯವರು ಜನಿಸಿದ್ದು ಜೂನ್ 6, 1922ರಲ್ಲಿ. ಅಹ್ಮದಾಬಾದಿನಲ್ಲಿ ಬಿಕಾಂ ಪದವಿ ಪಡೆದು ಠಕ್ಕರ್ ಬಾಪಾ ಅವರೊಂದಿಗೆ 2 ವರ್ಷ ಕೆಲಸ ಮಾಡಿದರು.
ಮುಂದೆ ಅವರನ್ನು ಕೈಬೀಸಿ ಕರೆದದ್ದು ಪತ್ರಿಕಾಪ್ರಪಂಚ. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ರಂಗನಾಥ ದಿವಾಕರ ಮತ್ತು ಮೊಹರೆ ಹನುಮಂತರಾಯರ ಮುಂತಾದವರ ಮಾರ್ಗದರ್ಶನದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಮತ್ತು ಕರ್ಮವೀರ ವಾರಪತ್ರಿಕೆಗಳಲ್ಲಿ ಅಕ್ಷರಕೃಷಿ ಮಾಡಿದರು. 1964ರಲ್ಲಿ ಬೆಂಗಳೂರಿನಲ್ಲಿ 'ಬೃಂದಾವನ ಪ್ರಿಂಟರ್ ಅಂಡ್ ಪಬ್ಲಿಷರ್ಸ್' ಮುದ್ರಣಾಲಯವನ್ನು ಸ್ಥಾಪಿಸಿ ಅದನ್ನು ಉತ್ತುಂಗಕ್ಕೆ ಏರಿಸಿದರು.
ಘಟಪ್ರಭಾದ ಕರ್ನಾಟಕ ಆರೋಗ್ಯಧಾಮ, ಕಸ್ತೂರಬಾ ಟ್ರಸ್ಟ್, ಗಾಂಧಿ ಸ್ಮಾರಕನಿಧಿ, ಲೋಕಸೇವಾ ಟ್ರಸ್ಟ್, ಖಾದಿ ಗ್ರಾಮೋದ್ಯೋಗ ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ದುಡಿದಿದ್ದರು.