ಮುಳಬಾಗಿಲು ಶ್ರೀ ವಿಜ್ಞಾನನಿಧಿ ತೀರ್ಥ ವೃಂದಾನಸ್ಥ
ಸಾಂಪ್ರದಾಯಿಕ ಆಚಾರ - ವಿಚಾರಗಳೊಂದಿಗೆ ವಿಜ್ಞಾನಪ್ರಯೋಗಗಳ ಆವಿಷ್ಕಾರ ಮತ್ತು ವೇದವಿಜ್ಞಾನ ಕುರಿತಂತೆ ಶ್ರೀ ವಿಜ್ಞಾನನಿಧಿ ತೀರ್ಥರು ಕಳೆದ ಮೂರು ದಶಕಗಳಿಂದ ಆಳವಾದ ಸಂಶೋಧನೆ ಮತ್ತು ಅಧ್ಯಯನ ನಡೆಸಿದ್ದರು. ಬೆಂಗಳೂರು ಮತ್ತು ಮುಳಬಾಗಿಲಿನಲ್ಲಿ ವೇದ ವಿಜ್ಞಾನ ಕ್ಷೇತ್ರದಲ್ಲಿ ಉನ್ನತಮಟ್ಟದ ಸಂಶೋಧನಾ ಅಧ್ಯಯನ ನಡೆಸಿರುವ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಗೆ ಶ್ರೀಗಳವರು ಸಂಸ್ಥಾಪಕ ಅಧ್ಯಕ್ಷರಾಗಿದ್ದರು.
ಹದಿನೈದನೆಯ ಶತಮಾನದ ಕನ್ನಡ ಹರಿದಾಸ ಸಾಹಿತ್ಯದ ಮೂಲ ಪ್ರವರ್ತಕ 'ರಂಗವಿಠಲ' ನಾಮಾಂಕಿತ ಶ್ರೀ ಶ್ರೀಪಾದರಾಜ ಪರಂಪರೆಯಲ್ಲಿ ಇವರು 36ನೆಯ ಯತಿಗಳಾಗಿದ್ದರು. ಶ್ರೀಗಳವರು ದಾಸಸಾಹಿತ್ಯ ಅಧ್ಯಯನ ಮತ್ತು ಜನಪ್ರಿಯತೆಗೆ ಮೀಸಲಾದ ರಂಗವಿಠಲ' ಮಾಸಪತ್ರಿಕೆಯ ವ್ಯವಸ್ಥಾಪಕ ಸಂಪಾದಕರೂ ಆಗಿದ್ದರು.
ಸನ್ಯಾಸ ಸ್ವೀಕಾರಕ್ಕೆ ಮುನ್ನ ಸುಮಾರು ನಾಲ್ಕು ದಶಕಗಳ ಕಾಲ ಸಾರ್ವಜನಿಕ ಸೇವಾಕ್ಷೇತ್ರ ಹಾಗೂ ಸಹಕಾರ ಕ್ಷೇತ್ರದ ಸಕ್ರಿಯ ಕಾರ್ಯಕರ್ತರಾಗಿದ್ದ ಶ್ರೀಗಳವರ ಪೂರ್ವಾಶ್ರಮದ ಹೆಸರು ಭೀಮಸೇನಾಚಾರ್ಯ. ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್, ಜಿಲ್ಲಾ ಕೃಷಿ ಸಹಕಾರ ಸಂಘ, ಮುಳಬಾಗಿಲು ಎಜುಕೇಷನ್ ಸೊಸೈಟಿ, ಇವೇ ಮೊದಲಾದ ಸಂಘಸಂಸ್ಥೆಗಳ ಸಂಸ್ಥಾಪಕರಾಗಿದ್ದ ಭೀಮಸೇನಾಚಾರ್ಯರು 1960ರ ದಶಕದಲ್ಲಿ ಕೋಲಾರ ಜಿಲ್ಲಾ ಪರಿಷತ್ತಿನ ಸದಸ್ಯರೂ ಮತ್ತು 1965ರಲ್ಲಿ ಮುಳಬಾಗಿಲು ನಗರಸಭಾಧ್ಯಕ್ಷರೂ ಆಗಿದ್ದರು.
ಶ್ರೀ ಶ್ರೀ ವಿಜ್ಞಾನನಿಧಿಗಳವರ ನಿಧನಕ್ಕೆ ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ, ನ್ಯಾಯಮೂರ್ತಿ ಗುರುರಾಜನ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.