ಕೆಐಎಡಿಬಿ ಹಗರಣದ ಸಿಡಿ ರಿಲೀಸ್ : ರೇವಣ್ಣ
ಕೆಐಎಡಿಬಿ ಹಗರಣದಲ್ಲಿ ಮುಖ್ಯಮಂತ್ರಿ ಮತ್ತು ಅವರ ಮಕ್ಕಳು ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಮಗ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಹೆಸರು ಈಗಾಗಲೇ ಬಯಲುಗೊಂಡಿದ್ದು, ಸಾಕ್ಷ್ಯಾಗಳನ್ನು ನಾಶ ಮಾಡಲು ಲಂಚ ನೀಡುತ್ತಿರುವ ಆರೋಪದ ಮೇಲೆ ಕಟ್ಟಾ ಜಗದೀಶ್ ಅವರು ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾರೆ. ಈ ಮಧ್ಯೆದಲ್ಲಿಯೇ ರೇವಣ್ಣ ಬಿಡುಗಡೆ ಮಾಡಿರುವ ಹಗರಣದ ಸಿಡಿ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಕೆಐಎಡಿಬಿ ಹಗರಣದ ಎಲ್ಲ ಪ್ರಕ್ರಿಯೆಗಳು ಕೈಗಾರಿಕ ಮಂತ್ರಿ ಮುರುಗೇಶ ನಿರಾಣಿ ನಿವಾಸದಲ್ಲಿ ನಡೆಯುತ್ತಿದ್ದವು ಜೊತೆಗೆ ಅವರ ಅಪ್ತ ಸಹಾಯಕ ಉಮೇಶ ಎಂಬುವವರು ಎಲ್ಲ ಕೊಡುಕೊಳ್ಳುವ ವ್ಯವಹಾರಗಳ ಡೀಲುಗಳನ್ನು ಮುಗಿಸುತ್ತಿದ್ದರು ಎಂಬ ಅಂಶ ಹೊಂದಿರುವ ಸಿಡಿ ಬಿಡುಗಡೆಗೊಂಡಿದ್ದರಿಂದ ಸರಕಾರ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೇವಣ್ಣ, ಕೆಐಎಡಿಬಿ ಹಗರಣದ ಪ್ರಮುಖ ಆರೋಪ ಮುಖ್ಯಮಂತ್ರಿ ಯಡಿಯೂರಪ್ಪ ಎಂದಿರುವ ಅವರು ಈ ಪ್ರಕರಣದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಅಲ್ಲದೇ ಮುರಗೇಶ ನಿರಾಣಿ ಅವರ ಕೈವಾಡವೂ ಇದೆ. ಅವರ ಆಪ್ತ ಕಾರ್ಯದರ್ಶಿ ಉಮೇಶ ಎಂಬುವವರು ಲಂಚ ಸ್ವೀಕರಿಸುತ್ತಿರುವ ದೃಶ್ಯ ಸಿಡಿಯಲ್ಲಿದೆ. ಕೆಐಎಡಿಬಿಯ ಎಲ್ಲ ಡೀಲುಗಳು ನಿರಾಣಿ ನಿವಾಸದಲ್ಲೇ ಕುದುರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸಿಡಿಯನ್ನು ಒಂದು ತಿಂಗಳ ಹಿಂದೆಯೇ ಚಿತ್ರೀಕರಿಸಲಾಗಿದೆ. ಕೆಐಎಡಿಬಿಯ ಭೂಮಿಯನ್ನು ಉದ್ಯಮಿಗಳಿಗೆ ಮಾರಾಟ ಮಾಡಲಾಗಿದೆ. ಪ್ರಕರಣದಲ್ಲಿ ಇಡೀ ಸರಕಾರವೇ ಭಾಗಿಯಾಗಿದ್ದು, ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.