ಒದ್ದೆ ಮುದ್ದೆಯಾದ ಹಾಸನ, ಉತ್ತರ ಕನ್ನಡ
ಹಾಸನ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಕೆರೆಗಳು ಕೋಡಿ ಹರಿದಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೋಡಿ ಬಿದ್ದ ಕೆರೆಯಿಂದ ಹರಿದು ಬರುತ್ತಿರುವ ನೀರಿನಿಂದ ಭತ್ತ, ಜೋಳ, ಶುಂಠಿ ಸೇರಿದಂತೆ ಕೆರೆ ಭಾಗದ ಬೆಳೆಗಳು ಸಂಪೂರ್ಣ ಕೊಚ್ಚಿ ಹೋಗಿವೆ. ಅಡಿಕೆ ತೋಟಗಳು ಜಲಾವೃತಗೊಂಡಿವೆ.
ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ, ಅತಿವೃಷ್ಟಿಯಿಂದ ಸಂಭವಿಸಿದ ಬೆಳೆನಷ್ಟಕ್ಕೆ 5 ಕೋಟಿ ರುಗಳ ಪರಿಹಾರವನ್ನು ರೈತರಿಗೆ ಮಂಜೂರು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರನ್ನು ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಮಳೆಯ ರೌದ್ರ ನರ್ತನ: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಇಬ್ಬರು ಬಲಿಯಾಗಿದ್ದು, ಸುಮಾರು 120 ಮನೆಗಳು ಕುಸಿದಿದೆ. 68.5 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, ಮೂರು ಕೆರೆಗಳು ಒಡೆದು 20 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇಂದು ಗೋಕರ್ಣದ ಆತ್ಮಲಿಂಗ ಕೂಡಾ ಜಲಾವೃತವಾಗಿ ಜನತೆಯಲ್ಲಿ ಆತಂಕ ಮೂಡಿತ್ತು. ಆದರೆ, ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿ, ದೇಗುಲವನ್ನು ಮಳೆಯ ಹಿಡಿತದಿಂದ ಬಚಾವ್ ಮಾಡಿದ್ದಾರೆ.
ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ, ಕೊಮಾರನ ಹಳ್ಳಿ, ಮಲೇಬೆನ್ನೂರು, ಹಿರೇಕೆರೂರು, ಹಾವೇರಿ,ರಾಣೆಬೆನ್ನೂರು ಮುಂತಾದೆಡೆ ಮಳೆ ಇನ್ನೂ ತನ್ನ ನರ್ತನವನ್ನು ಮುಂದುವರೆಸಿದೆ. ತುಂಗಭದ್ರ ನದಿ ನೀರಿನ ಮಟ್ಟ 7.7 ಮೀಟರ್ ಏರಿಕೆ ಕಂಡಿದೆ. ಮುಂದಿನ ಎರಡು ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.