ಮಾಸ್ತಿ ಭವನಕ್ಕೆ ಬಿಡಿಎ ನಿವೇಶನ : ಸಿಎಂ
ಸಮಗ್ರ ಸಂಪುಟದ ಸಾವಿರ ಪ್ರತಿ ಖರೀದಿಸಿ, ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಗ್ರಂಥಾಲಯಗಳಿಗೆ ವಿತರಿಸಲಾಗುವುದು. ಪ್ರಮುಖ ರಸ್ತೆಯೊಂದಕ್ಕೆ ಮಾಸ್ತಿ ಹೆಸರು ಇಡಲಾಗುವುದು ಎಂದರು. 'ಮಾಸ್ತಿ ಕನ್ನಡದ ಆಸ್ತಿ" ಎಂಬುದು ಕೇವಲ ಅಲಂಕಾರಿಕವಲ್ಲ. ಅವರ ಬದುಕು ಅಂತರಂಗ-ಬಹಿರಂಗ ಶುದ್ಧಿಯಿಂದ ಕೂಡಿತ್ತು. 1997ರಲ್ಲಿಯೇ ಮಾಸ್ತಿ ಪ್ರತಿಷ್ಠಾನ ರಚಿಸಲಾಗಿದ್ದು, ಪ್ರತಿ ವರ್ಷ ನೆರವು ನೀಡಲಾಗುತ್ತಿದೆ. ನಮ್ಮ ಸರಕಾರ ಬಂದ ಮೇಲೆ ಸಾಹಿತ್ಯದ ವಿಕಾಸಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಮಾತನಾಡಿ, ಮಾಸ್ತಿ ಪ್ರತಿಮೆ ಸ್ಥಾಪಿಸಬೇಕು. ಜತೆಗೆ ಬೆಳವಡಿ ಮಲ್ಲಮ್ಮ ಅವರ ಪ್ರತಿಮೆಯನ್ನೂ ಸ್ಥಾಪಿಸಬೇಕು. ಸಮಗ್ರ ಸಂಪುಟ ಹೊರ ತಂದಿರುವುದರಿಂದ ಮಾಸ್ತಿಯವರಿಗೆ ಮರಣೋತ್ತರ ಪ್ರಶಸ್ತಿ ಬಂದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ. ಎಚ್. ಕೃಷ್ಣಯ್ಯ ಮಾತನಾಡಿ, ಮಾಸ್ತಿ ಸಾಹಿತ್ಯ ಕುರಿತ ವಿಮರ್ಶೆಯ ಸಮಗ್ರ ಒಳನೋಟ ಈ ಕೃತಿಯಲ್ಲಿ ಇದೆ. ಡಿವಿಜಿ, ಎ.ಆರ್. ಕೃಷ್ಣ ಮೂರ್ತಿ ಅವರಿಂದ ಹಿಡಿದು ಇತ್ತೀಚಿನ ಬರಹಗಾರರು ಮಾಸ್ತಿ ಸಾಹಿತ್ಯದ ವಿಮರ್ಶೆ ಮಾಡಿದ ಲೇಖನಗಳಿವೆ ಎಂದರು.