ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಪತ್ರಿಕೆಗಳಲ್ಲಿ ಅಯೋಧ್ಯಾ ಹೆಡ್ ಲೈನ್ಸ್

By * ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
|
Google Oneindia Kannada News

Ayodhya verdict : Newspaper headlines
ರಾಮ(ಜನ್ಮಭೂಮಿ)ಕಥೆ ಒಂದು ಘಟ್ಟವನ್ನು ತಲುಪಿದೆ. ನ್ಯಾಯಾಲಯದ ತೀರ್ಪಿನ ಸುದ್ದಿಗೆ ನಮ್ಮ ದಿನಪತ್ರಿಕೆಗಳು ಹೇಗೆಲ್ಲ ಶೀರ್ಷಿಕೆಗಳನ್ನು ಕೊಡುವವೆಂದು ನೋಡುವ ಕುತೂಹಲ ನನಗಿತ್ತು. ಕನ್ನಡದ ಎಲ್ಲ ಮುಖ್ಯ ದಿನಪತ್ರಿಕೆಗಳನ್ನೂ ಗಮನಿಸಿ ಈ ಶೀರ್ಷಿಕೋಪಾಖ್ಯಾನ ಬರೆಯುತ್ತಿದ್ದೇನೆ, ಓದಿ ಆನಂದಿಸಿ.

ಪದ್ಧತಿ ಪಾಲಿಸುವ ಪತ್ರಿಕೆಯಾದ 'ಪ್ರಜಾವಾಣಿ'ಯು, 'ಅಯೋಧ್ಯೆ : ಮೂರು ಪಾಲು' ಎಂಬ ಶೀರ್ಷಿಕೆ ನೀಡುವ ಮೂಲಕ ನೇರವಾಗಿ ವಿಷಯ ತಿಳಿಸುವ ತನ್ನ ಪದ್ಧತಿಯನ್ನು ಪಾಲಿಸಿದೆ. ಆದರೆ, ಇಡೀ ಅಯೋಧ್ಯೆ ಪಟ್ಟಣವೇ ಮೂರು ಪಾಲಾಗಬೇಕೆಂಬ ಅಪಾರ್ಥಕ್ಕೂ ಈ ಶೀರ್ಷಿಕೆ ಎಡೆಮಾಡಿಕೊಡುತ್ತದೆ!

'ಕನ್ನಡ ಪ್ರಭ'ವು, '3 ಭಾಗ; ಭಾವೈಕ್ಯತೆಗೆ ಪಂಚಾಂಗ' ಎಂದು ತಲೆಬರಹ ನೀಡುವ ಮೂಲಕ ತನ್ನ ಭಾವೈಕ್ಯೋದ್ದೇಶವನ್ನು ಪ್ರಚುರಪಡಿಸಿದೆ.

'ಉದಯವಾಣಿ'ಯು, ತನ್ನ ಬೇರೆ ಬೇರೆ ಆವೃತ್ತಿಗಳಲ್ಲಿ, 'ಜೈ ಜನ್ಮಭೂಮಿ' ಎಂಬ ಆಕರ್ಷಕ ಶೀರ್ಷಿಕೆಯನ್ನೂ ಮತ್ತು 'ರಾಮಜನ್ಮಸ್ಥಾನ' ಎಂಬ, ಅರ್ಥಪೂರ್ಣವೆಂದುಕೊಂಡ, ಆದರೆ ಅತಿಸಾಮಾನ್ಯ ಶೀರ್ಷಿಕೆಯನ್ನೂ ನೀಡಿದೆ.

ಹೊಸತನದ ಹಂಬಲದ 'ವಿಜಯ ಕರ್ನಾಟಕ'ವು, 'ರಾಮ ರಹೀಮ ನಿರ್ಮೋಹಿ' ಎಂದು ಹೊಸಬಗೆಯ, ಆದರೆ, ಅನಾಕರ್ಷಕ ತಲೆಬರಹ ನೀಡಿದೆ.

ವೈದಿಕ ಛಾಪಿನ ಪತ್ರಿಕೆಯಾದ 'ಸಂಯುಕ್ತ ಕರ್ನಾಟಕ'ವು, 'ಶ್ರೀ ರಾಮ ಜಯಂ' ಎಂದು ಮಂತ್ರೋಪಮ ಶೀರ್ಷಿಕೆಯನ್ನೇನೋ ನೀಡಿದೆ, ಆದರೆ, 'ಹೇ ರಾಂ' ಎಂದು ಅದಕ್ಕೊಂದು ಹಿಂಬಾಲ ಸೇರಿಸಿ ವಿಪರೀತಾರ್ಥಕ್ಕೆ ಅವಕಾಶ ಮಾಡಿಕೊಟ್ಟಿದೆ!

'ಹೊಸ ದಿಗಂತ'ವು, 'ಜೈಶ್ರೀರಾಮ್' ಎಂದು ತನ್ನ ಧ್ಯೇಯಕ್ಕೆ ತಕ್ಕುದಾದ ಮತ್ತು ಅರ್ಥಗರ್ಭಿತ ಶೀರ್ಷಿಕೆ ನೀಡಿದೆಯಲ್ಲದೆ, ಉಪಶೀರ್ಷಿಕೆಯನ್ನೂ ಸೇರಿಸಿಕೊಂಡು ಓದಿದಾಗ, 'ಅಯೋಧ್ಯೆಯೇ ರಾಮಜನ್ಮಭೂಮಿ, ಜೈಶ್ರೀರಾಮ್', ಎಂದು ವಿಜಯಘೋಷ ಮೊಳಗುವಂತೆ ಮಾಡಿ ಚಾತುರ್ಯ ತೋರಿದೆ!

ಇನ್ನು, ನಮ್ಮ 'ದಟ್ಸ್ ಕನ್ನಡ'ವು 'ರಾಮ ರಹೀಮ ಇಬ್ಬರಿಗೂ ಜಾಗ' ಮಾಡಿಕೊಟ್ಟಿದೆ. ಇಬ್ಬರ ಭಕ್ತರೂ ಖುಷ್. ಯಾವ ಪತ್ರಿಕೆಯೂ ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಶೀರ್ಷಿಕೆಯ ಗೋಜಿಗೆ ಹೋಗದೆ ಸಾಮಾಜಿಕ ಹೊಣೆಗಾರಿಕೆ ಮೆರೆದಿರುವುದು ಸ್ವಾಗತಾರ್ಹ ಸಂಗತಿ.

ಒಂದು ವೇಳೆ ನಾನೇನಾದರೂ ಈ ಪತ್ರಿಕೆಗಳ ಸಂಪಾದಕನಾಗಿದ್ದರೆ ಯಾವ ಬಗೆಯ ಶೀರ್ಷಿಕೆಗಳನ್ನು ಕೊಡುತ್ತಿದ್ದೆ? ಹೀಗೇ ಲಘುಲಹರಿಯಲ್ಲಿ ಬರೆದಿದ್ದೇನೆ, ಕಣ್ಣುಹಾಯಿಸಿ; ಗಂಭೀರವಾಗಿ ತೆಗೆದುಕೊಳ್ಳಬೇಡಿ.

ಇದ್ದದ್ದನ್ನು ಇದ್ದಂತೆ ಹೇಳುವ ಪದ್ಧತಿಯ ಪ್ರಜಾವಾಣಿ : 'ವಿವಾದಿತ ಸ್ಥಳ ಮೂರು ಭಾಗಗಳಲ್ಲಿ ಹಂಚಿಕೆ'.

ವಿಮರ್ಶೋಪದೇಶಭರಿತ ಕನ್ನಡ ಪ್ರಭ : 'ಸರ್ವರಿಗೂ ಪಾಲು: ಸಾಮರಸ್ಯವೆ ಮೇಲು'.

ಆರಕ್ಕೇರದ ಮೂರಕ್ಕಿಳಿಯದ ಧೋರಣೆಯ ಉದಯವಾಣಿ : 'ರಾಮಜನ್ಮಸ್ಥಾನ ಸುಭದ್ರ'.

ಪದಚಾತುರ್ಯ, ಪ್ರಾಸ, ಅಕ್ಷರತ್ರಾಸಗಳಿಗೆ ಜೋತುಬೀಳುವ ವಿಜಯ ಕರ್ನಾಟಕ : 'ರಾಮ್ ಲಲ್ಲಾ, ಪೂರ್ತಿ ಇಲ್ಲ'.

ಧರ್ಮವೆ ಜಯವೆಂಬ ದಿವ್ಯ ಮಂತ್ರ ಜಪಿಸುವ ಸಂಯುಕ್ತ ಕರ್ನಾಟಕ : 'ಸನಾತನ ಧರ್ಮಕ್ಕೆ ಜಯ; ಶ್ರೀರಾಮ ವಿಜಯ'.

ತಾನು ನಂಬಿದ ಧ್ಯೇಯನಿಷ್ಠೆಯ ಗುರಿಕಾರ ಹೊಸ ದಿಗಂತ : 'ಅಂದು ದೇಶ ವಿಭಜನೆ, ಇಂದು ದೇಗುಲಸ್ಥಳ ವಿಭಜನೆ'.

ನನ್ನ-ನಿಮ್ಮ ನೆಚ್ಚಿನ 'ದಟ್ಸ್ ಕನ್ನಡ' : 'ಹಂಚಿಕೆಯ ನೇರ್ಪು; ದಟ್ಸ್ ತೀರ್ಪು'.

ಇತಿ ಶೀರ್ಷಿಕೋಪಾಖ್ಯಾನ ಅರ್ಥಾತ್ ತಲೆಹರಟೆ ಮುಕ್ತಾಯ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X