ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಶತ ಕೋಟಿ ರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಕೇಂದ್ರ ಸರಕಾರ ಮಂಜೂರು ಮಾಡಿರುವ ಅನುದಾನವನ್ನು ಸಮಗ್ರವಾಗಿ ಬಳಸಿಕೊಳ್ಳಲು, 2011-14ಕ್ಕೆ ಅನ್ವಯವಾಗುವಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದರು. ರಾಜ್ಯ ಪತ್ರಾಗಾರವು ಮೂರು ಲಕ್ಷಕ್ಕೂ ಮೇಲ್ಪಟ್ಟು ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ಇವುಗಳಲ್ಲಿ ಪ್ರಮುಖವಾಗಿ ಟಿಪ್ಪು ಸುಲ್ತಾನ್ರ ಆಳ್ವಿಕೆಯಲ್ಲಿನ 1799ರ ಶ್ರೀರಂಗಪಟ್ಟಣದ ಒಪ್ಪಂದ, ಬ್ರಿಟಿಷ್ ಆಳ್ವಿಕೆಯ ದಾಖಲೆಗಳು ಹಾಗೂ 1866ರಲ್ಲಿ ಪ್ರಕಟಿಸಲಾದ ಮೊದಲನೇ ಗೆಜೆಟ್ ಇದೆ ಎಂದು ಕಾರಜೋಳ ಹೇಳಿದರು.
ಸರ್.ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಶೇಷಾದ್ರಿ ಐಯ್ಯಂಗಾರ್, ದಿವಾನ್ ರಂಗಾಚಾರ್ಲು ಇವರ ವ್ಯವಹಾರಗಳ ಪತ್ರಗಳು ಹಾಗೂ 300 ಕ್ಕೂ ಮೇಲ್ಪಟ್ಟ ಗಣ್ಯ ವ್ಯಕ್ತಿಗಳ ಸ್ವತಂತ್ರ ಹೋರಾಟಗಾರರ ದಾಖಲೆಗಳನ್ನು ಸಂರಕ್ಷಿಸಿಡಲಾಗಿದೆ. ಈ ದಾಖಲೆಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಗಣಕೀಕರಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಹಂಪಿ ಉತ್ಸವ, ಕದಂಬೋತ್ಸವ, ದಸರಾ ಉತ್ಸವದಲ್ಲಿ ಈ ದಾಖಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ 80 ಲಕ್ಷ ರುಪಾಯಿ ಅನುದಾನವಿದ್ದು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಐತಿಹಾಸಿಕ ದಾಖಲೆಗಳ ಸಂರಕ್ಷಣೆ, ಲ್ಯಾಮಿನೇಷನ್, ಬೈಂಡಿಂಗ್ ಮಾಡಿಸಲಾಗುವುದು ಹಾಗೂ ಚಾರಿತ್ರಿಕ ಮಹತ್ವವುಳ್ಳ ದಾಖಲೆಗಳನ್ನು ಸ್ಕಾನಿಂಗ್ ಮಾಡಿ, ಗಣಕೀಕರಣ ಡಿಜಿಟಲೈಜೆಷನ್ ಮಾಡಲಾಗುವುದು ಎಂದು ಅವರು ತಿಳಿಸಿದರು.