ಮಾನವ ಧರ್ಮ ದೊಡ್ಡದು
ಅಯೋಧ್ಯೆ ವಿವಾದದ ತೀರ್ಪಿನ ನೆಪದಲ್ಲಿ ನಾವು ಹಿಂಸಾಚಾರಕ್ಕಿಳಿದು ಮಾನವಧರ್ಮವನ್ನೇ ಧಿಕ್ಕರಿಸುವ ಅಪರಾಧ ಮಾಡಬಾರದು. ತಂತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ಪುಢಾರಿಗಳು ಈ ಸಂದರ್ಭದಲ್ಲಿ ಹಿಂಸೆಯ ಕಿಚ್ಚು ಹಚ್ಚಲು ಯತ್ನಿಸುತ್ತಾರೆ. ವಿವೇಕಿಗಳಾಗಿರುವ ನಾವು ಅವರ ಈ ಕುಟಿಲಕ್ಕೆ ಬಲಿಯಾಗಬಾರದು. ಅವರ ಕುಟಿಲನೀತಿ ಇನ್ನು ಈ ದೇಶದಲ್ಲಿ ನಡೆಯುವುದಿಲ್ಲವೆಂಬುದನ್ನು ಸಿದ್ಧಮಾಡಿ ತೋರಿಸಲು ಭಾರತದ ಪ್ರಜೆಗಳಾದ ನಮಗಿದೊಂದು ಅವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಾವು ದೇಶಾದ್ಯಂತ ಶಾಂತಿ ಕಾಪಾಡಿಕೊಂಡುಹೋಗುವ ಮೂಲಕ ಈ ಕುತ್ಸಿತಮತಿಗಳಿಗೆ ತಕ್ಕ ಪಾಠ ಕಲಿಸಬೇಕು.
ಇನ್ನೂ ಒಂದು ಮುಖ್ಯ ಸಂಗತಿಯೆಂದರೆ, ವಿಶ್ವದ ಬಹುಪಾಲು ದೇಶಗಳು ಅಯೋಧ್ಯೆ ತೀರ್ಪಿಗೆ ಭಾರತೀಯರ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನು ಕುತೂಹಲದಿಂದ ಎದುರುನೋಡುತ್ತಿವೆ. ಅಮೆರಿಕಾ, ಚೀನಾ, ಪಾಕಿಸ್ಥಾನದಂತಹ ದೇಶಗಳಂತೂ ಭಾರತದಲ್ಲಿ ಭಾರಿ ಗಲಭೆಗಳಾಗಲಿ ಎಂದು ಹಾರೈಸಿಕೊಂಡಿವೆ. ಯಾವುದೇ ರೀತಿಯ ಗಲಭೆಗೂ ಆಸ್ಪದ ಕೊಡದೆ ಸಂಪೂರ್ಣ ಶಾಂತಿ ಕಾಪಾಡುವ ಮೂಲಕ ಭಾರತೀಯರಾದ ನಾವು ಇಡೀ ವಿಶ್ವವೇ ಹುಬ್ಬೇರಿಸುವಂತೆ ಮಾಡಬೇಕು. ಗಲಭೆ ಹಾರೈಸಿದ ರಾಷ್ಟ್ರಗಳು ಹತಾಶೆಯಿಂದ ತಲೆತಗ್ಗಿಸುವಂತೆ ಮಾಡಬೇಕು. ಭಾರತವನ್ನು ಛಿದ್ರಗೊಳಿಸುವುದು ಅಸಾಧ್ಯವಾದ ಕೆಲಸ ಎಂದು ವಿಶ್ವವು ಅರಿಯುವಂತೆ ಮಾಡುವ ಮೂಲಕ ನಮ್ಮ ಗಟ್ಟಿತನವನ್ನು ಜಗತ್ತಿಗೆ ಸಾರಲು ಇದೊಂದು ಅವಕಾಶ. ಈ ಅವಕಾಶ ಹುಸಿಹೋಗದಿರಲಿ.